ಬೆಳಗಾವಿ: ಮಾರುಕಟ್ಟೆಯಲ್ಲಿ ಕೊತ್ತಂಬರಿ ಸೊಪ್ಪಿಗೆ ಸೂಕ್ತ ಬೆಲೆ ಸಿಗದ ಹಿನ್ನೆಲೆ ಬೆಳಗಾವಿ ತಾಲೂಕಿನ ಕೇದನೂರ ಗ್ರಾಮದ ರೈತರು ತಾವು ಬೆಳೆದಿದ್ದ ಕೊತ್ತಂಬರಿ ಬೆಳೆಯನ್ನು ಹೊಲದಲ್ಲೇ ನಾಶಪಡಿಸಿದ್ದಾರೆ.
ಸಾವಿರಾರು ರೂಪಾಯಿ ವೆಚ್ಚ ಮಾಡಿ ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗದ ಕಾರಣ ರೈತರು ತಮ್ಮ ಕೈಯಾರೆ ಕೊತ್ತಂಬರಿ ಕಿತ್ತು, ಮಿನಿ ರೂಟರ್ ಹರಿಸಿ ಸಂಪೂರ್ಣ ಬೆಳೆ ನಾಶಪಡಿಸಿದ್ದಾರೆ. ಈ ವರ್ಷ ಉತ್ತಮ ಆದಾಯದ ನಿರೀಕ್ಷೆಯೊಂದಿಗೆ ಕೇದನೂರಿನ ಹಲವು ರೈತರು ಕೊತ್ತಂಬರಿ ಬೆಳೆ ಬೆಳೆದಿದ್ದರು. ಒಂದೆಡೆ ಮಳೆಯ ಕೊರತೆಯಿಂದ ಉತ್ಪಾದನೆ ಮೇಲೆ ಪರಿಣಾಮ ಬೀರಿದರೆ, ಮತ್ತೊಂದೆಡೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ.
ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆ ಕೈಗೆ ಬಂದರೂ, ಅದರ ಲಾಭ ಮಾತ್ರ ಬಾಯಿಗೆ ಬರಲಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ. ಕೊತ್ತಂಬರಿ ಮಾತ್ರವಲ್ಲದೆ, ಮಳೆಯ ಅಭಾವ ಮತ್ತು ದರ ಕುಸಿತದಿಂದ ಗೆಣಸು, ಆಲೂಗಡ್ಡೆ, ಮೆಣಸಿನಕಾಯಿ ಸೇರಿದಂತೆ ವಿವಿಧ ತರಕಾರಿ ಬೆಳೆಗಾರರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೂಕ್ತ ದರ ಸಿಗದ ಹಿನ್ನೆಲೆ ಜಮೀನಿನಲ್ಲೇ ಹೂಬಿಟ್ಟ ಕೊತ್ತಂಬರಿ ಸೊಪ್ಪನ್ನು ರೈತರು ರೂಟರ್ ಹರಿಸಿ ನಾಶಪಡಿಸಿದ್ದಾರೆ.
ನಷ್ಟಕ್ಕೀಡಾದ ರೈತರಿಗೆ ತಕ್ಷಣವೇ ಸಮರ್ಪಕ ಪರಿಹಾರ ಘೋಷಿಸಬೇಕು. ಬೆಳೆಗೆ ಬೆಲೆ ಕೊಡಿ, ರೈತನ ಬದುಕು ಉಳಿಸಿ ಎಂದು ರೈತರು ಆಗ್ರಹಿಸಿದ್ದಾರೆ.
Laxmi News 24×7