ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 35ಕ್ಕೆ ತಲುಪಿದರೂ ಜನ ಬುದ್ಧಿ ಕಲಿಯುತ್ತಿಲ್ಲ. ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದು, ತಂಡೋಪತಂಡವಾಗಿ ಮಾರುಕಟ್ಟೆಗೆ ಆಗಮಿಸುತ್ತಿದ್ದಾರೆ. ಜನರ ನಿಯಂತ್ರಣ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ
ಸದ್ಯ ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ 35ಕ್ಕೆ ಏರಿಯಾಗಿದೆ. ಈ ಸಂಖ್ಯೆ ಇನ್ನೂ ದುಪ್ಪಟ್ಟಾಗುವ ಆತಂಕವಿದೆ. ಹೀಗಾಗಿ, ಜನರು ಮನೆಯಿಂದ ಹೊರಗೆ ಬಾರದಂತೆ ನೋಡಿಕೊಳ್ಳಲು ಮೈಸೂರು ಜಿಲ್ಲಾಡಳಿತ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಇದರ ಭಾಗವಾಗಿ ಅವಶ್ಯಕ ಸಾಮಾಗ್ರಿಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಆದರೆ ಮೈಸೂರಿನ ಲಲಿತ್ ಮಹಲ್ ಮೈದಾನದಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ಮಾತ್ರ ಜನಜಂಗುಳಿ ಉಂಟಾಗಿದೆ.
ಆದರೂ ಜನ ಮಾತ್ರ ಹೊರಗಡೆ ಬರುವುದನ್ನು ನಿಲ್ಲಿಸುತ್ತಿಲ್ಲ. ತರಕಾರಿ ಮಾರುಕಟ್ಟೆಯಲ್ಲಿ ಜನ ಹೆಚ್ಚಾಗುತ್ತಿದ್ದ ಕಾರಣ ತಾತ್ಕಾಲಿಕವಾಗಿ ಆಯಾ ಬಡಾವಣೆಗಳಲ್ಲೇ ತರಕಾರಿ ಮಾರುಕಟ್ಟೆ ಆರಂಭಿಸಲಾಗಿದೆ. ಆದರೂ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸಂತೆಯಲ್ಲಿ ತರಕಾರಿ ಖರೀದಿ ಮಾಡುತ್ತಿದ್ದಾರೆ.