ಮುಂಬೈ: ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಆದಾಗಲೇ 2020ರ ಐಪಿಎಲ್ ಆವೃತ್ತಿ ಆರಂಭವಾಗಿ ಅಭಿಮಾನಿಗಳಿಗೆ ಭರಪೂರ ಮನರಂಜನೆ ಲಭಿಸುತ್ತಿತ್ತು. ಆದರೆ ಕೊರೊನಾ ಕಾರಣದಿಂದ ಟೂರ್ನಿ ಮುಂದೂಡಲಾಗಿದ್ದು, ಅಭಿಮಾನಿಗಳು ಸೇರಿದಂತೆ ಹಲವು ಕ್ರಿಕೆಟ್ ಆಟಗಾರರು ಈ ಕುರಿತು ಬೇಸರಗೊಂಡಿದ್ದಾರೆ.
ಲಾಕ್ಡೌನ್ನಿಂದಾಗಿ ಮನೆಯಲ್ಲೇ ಉಳಿದಿರುವ ಹಲವು ಆಟಗಾರು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಇತ್ತ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಇನ್ಸ್ಟಾ ಮೂಲಕ ಅಭಿಮಾನಿಗಳೊಂದಿಗೆ ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಇನ್ಸ್ಟಾ ಲೈವ್ನಲ್ಲಿ ಹರ್ಭಜನ್ ಸಿಂಗ್ರೊಂದಿಗೆ ಪ್ರತ್ಯಕ್ಷರಾಗಿದ್ದ ರೋಹಿತ್ ಶರ್ಮಾ ಲಾಕ್ಡೌನ್ ಕುರಿತು ಬೇಸರ ವ್ಯಕ್ತಪಡಿಸಿ ಚೀನಾಗೆ ಟಾಂಗ್ ನೀಡಿದ್ದರು. ಎಲ್ಲರಿಗೂ ತಿಳಿದಿರುವಂತೆ ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಹೆಮ್ಮರಿ ಇಡೀ ವಿಶ್ವವನ್ನು ತಲ್ಲಣಗೊಳಿಸಿದೆ. ಈಗಲೂ ವೈರಸ್ ತಡೆಯಲು ಹಲವು ದೇಶಗಳು ಲಾಕ್ಡೌನ್ನಂತಹ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಈ ಕುರಿತು ಮಾತನಾಡುತ್ತಿದ್ದ ರೋಹಿತ್ ಶರ್ಮಾ, ಈ ಚೀನಿಯರು ಏನು ಮಾಡಿದ್ರು ಎಂದು ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದರು. ಇದಕ್ಕೂತ್ತರಿಸಿದ ಭಜ್ಜಿ, ನಮ್ಮನ್ನು ಮನೆಯಲ್ಲೇ ಕುಳಿತು ಕೊಳ್ಳುವಂತೆ ಮಾಡಿದ್ದಾರೆ ಎಂದು ನಗೆ ಚೆಲ್ಲಿದ್ದರು.
ಇದೇ ವೇಳೆ ತಮ್ಮ ಮುಂದಿನ ಗುರಿಗಳ ಬಗ್ಗೆ ಸ್ಪಷ್ಟಪಡಿಸಿರುವ ರೋಹಿತ್ ಶರ್ಮಾ, ಮುಂಬರುವ 3 ವಿಶ್ವಕಪ್ ಟೂರ್ನಿಗಳಲ್ಲಿ ಕನಿಷ್ಠ 2 ಕಪ್ಗಳನ್ನು ಗೆಲ್ಲುವ ಗುರಿ ಹೊಂದಿರುವುದಾಗಿ ತಿಳಿಸಿದರು. 2020ರ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿದ್ದು, ಮುಂದಿನ ವರ್ಷದ ವಿಶ್ವಕಪ್ ಟೂರ್ನಿ ಭಾರತದಲ್ಲಿ ನಡೆಯಲಿದೆ. ಅಲ್ಲದೇ 2023ರಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ.
ಭಾರತದಲ್ಲೂ ಕೊರೊನಾ ವೈರಸ್ ತೀವ್ರತೆ ಹೆಚ್ಚಾಗಿದ್ದು, ಮಾರ್ಚ್ 24 ರಿಂದ ಲಾಕ್ಡೌನ್ ಜಾರಿ ಮಾಡಲಾಗಿದೆ. ಮೇ 3ರ ವರೆಗೂ ಮುಂದುವರಿದಿರುವ ಲಾಕ್ಡೌನ್ ಯಾವಾಗ ತೆರವು ಮಾಡಲಾಗುತ್ತದೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ದೇಶ ಸಂದಿಗ್ಧ ಸಂದರ್ಭದಲ್ಲಿ ಜನರ ನೆರವಿಗೆ ಆಗಮಿಸಿದ್ದ ರೋಹಿತ್ ಶರ್ಮಾ 80 ಲಕ್ಷ ರೂ. ದೇಣಿಗೆಯನ್ನು ಸರ್ಕಾರಕ್ಕೆ ನೀಡಿದ್ದರು. ರೋಹಿತ್ ಶರ್ಮಾರಂತೆ ಹಲವು ಕ್ರಿಕೆಟ್ ಆಟಗಾರರು ಸಹಾಯದ ನೆರವು ನೀಡಿದ್ದರು.