ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ಟಿವಿಕೆಗೆ ಶುಭಾಶಯ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಟಿವಿಕೆ ಮುಖ್ಯಸ್ಥ ವಿಜಯ್ ಧನ್ಯವಾದ ಅರ್ಪಿಸಿದ್ದಾರೆ.
ದಶಕಗಳಿಂದ ಎಐಎಡಿಎಂಕೆ ಮತ್ತು ಡಿಎಂಕೆ ಆಡಳಿತಕ್ಕೆ ಒಳಪಟ್ಟಿದ್ದ ತಮಿಳುನಾಡು ರಾಜಕೀಯದಲ್ಲಿ ವಿಜಯ್ ಕ್ರಾಂತಿಕಾರಿ ಬದಲಾವಣೆ ತಂದಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆಯ ಜನಾದೇಶ ನಿನ್ನೆ ಹೊರಬಿದ್ದಿದ್ದು, ಟಿವಿಕೆ ಭರ್ಜರಿ ಗೆಲುವು ದಾಖಲಿಸಿದೆ.
‘ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರೇ, ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು. ನಮ್ಮ ಜನರ ಯೋಗಕ್ಷೇಮವೇ ನಮ್ಮ ಏಕೈಕ ಗುರಿಯಾಗಿದೆ. ರಾಜಕೀಯವನ್ನು ಮೀರಿ, ನಾವು ರಾಜ್ಯದ ಪ್ರಗತಿ ಮತ್ತು ತಮಿಳುನಾಡಿನ ಜನರ ಕಲ್ಯಾಣದ ಮೇಲೆ ಗಮನ ಕೇಂದ್ರೀಕರಿಸುತ್ತೇವೆ. ಈ ಪ್ರಯತ್ನದಲ್ಲಿ ಕೇಂದ್ರ ಸರ್ಕಾರದ ಬೆಂಬಲವನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ವಿಜಯ್ ಎಕ್ಸ್ ಪೋಸ್ಟ್ನಲ್ಲಿ ಧನ್ಯವಾದ ತಿಳಿಸಿದ್ದಾರೆ.
‘ಲೋಕಸಭೆಯ ಗೌರವಾನ್ವಿತ ವಿರೋಧ ಪಕ್ಷದ ನಾಯಕರ ಕರೆ ಮತ್ತು ಶುಭಾಶಯಗಳಿಗಾಗಿ ನನ್ನ ಪ್ರಾಮಾಣಿಕ ಧನ್ಯವಾದಗಳು. ಸಾರ್ವಜನಿಕ ಸೇವೆಯಲ್ಲಿ ಶ್ರೇಷ್ಠತೆಗೆ ಮತ್ತು ಸಾಮೂಹಿಕ ಸಹಕಾರದ ಅಗತ್ಯವಿರುವ ನಮ್ಮ ರಾಜ್ಯದ ಸಾಂಸ್ಕೃತಿಕ ನೀತಿಯನ್ನು ಸಂರಕ್ಷಿಸಲು ನಾವು ಬದ್ಧರಾಗಿರುತ್ತೇವೆ. ರಾಜಕೀಯವನ್ನು ಮೀರಿ, ತಮಿಳುನಾಡಿನ ಜನರ ಕಲ್ಯಾಣಕ್ಕೆ ನಾವು ಆದ್ಯತೆ ನೀಡುತ್ತೇವೆ ಎಂದು ರಾಹುಲ್ ಗಾಂಧಿ ಪೋಸ್ಟ್ಗೆ ಟಿವಿಕೆ ನಾಯಕ ಪ್ರತಿಕ್ರಿಯಿಸಿದ್ದಾರೆ.
108 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಂತರ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಈಗಾಗಲೇ ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದೆ. 234 ಸದಸ್ಯ ಬಲದ ವಿಧಾನಸಭೆಯಲ್ಲಿ ಯಾವುದೇ ಪಕ್ಷಕ್ಕೆ 118 ಸ್ಥಾನಗಳ ಬಹುಮತ ಸಿಗದ ಕಾರಣ, ರಾಜ್ಯವು ರಾಜಕೀಯ ಅನಿಶ್ಚಿತತೆ ಮತ್ತು ತೀವ್ರ ಮಾತುಕತೆಗಳ ಹಂತಕ್ಕೆ ತಲುಪಿದೆ.
ಟಿವಿಕೆ ಬಹುಮತಕ್ಕೆ 10 ಸ್ಥಾನಗಳ ಕೊರತೆ ಕೊಂದಿದೆ. ಸಂಭಾವ್ಯ ಮೈತ್ರಿಗಳ ಬಗ್ಗೆ ಊಹಾಪೋಹದ ಮಾತುಗಳು ಕೇಳಿಬರುತ್ತಿವೆ. ವಿಜಯ್ ಅವರ ಪಕ್ಷವನ್ನು ಯಾವ ಪಕ್ಷಗಳು ಅಥವಾ ಸ್ವತಂತ್ರರು ಬೆಂಬಲಿಸಬಹುದು ಎಂಬುದರತ್ತ ಗಮನ ಕೇಂದ್ರೀಕರಿಸಲಾಗಿದೆ.
ಟಿವಿಕೆಯ ಪ್ರಬಲ ಪ್ರದರ್ಶನದಲ್ಲಿ ಯುವ ಮತದಾರರು ಮತ್ತು ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಕಾಂಗ್ರೆಸ್ನ ತಮಿಳುನಾಡು ಉಸ್ತುವಾರಿ ಗಿರೀಶ್ ಚೋಡಂಕರ್ ಹೇಳಿದ್ದಾರೆ. ಮುಂದಿನ ಕ್ರಮವನ್ನು ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಕೆ.ಸಿ.ವೇಣುಗೋಪಾಲ್ ಸೇರಿದಂತೆ ಪಕ್ಷದ ನಾಯಕತ್ವ ನಿರ್ಧರಿಸುತ್ತದೆ ಎಂದು ತಿಳಿಸಿದ್ದಾರೆ.
Laxmi News 24×7