ಜೈಪುರ: ರಾಜಸ್ಥಾನದ ಜೋಧ್ಪುರ ವಿಮಾನ ನಿಲ್ದಾಣದಲ್ಲಿ 480 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಟರ್ಮಿನಲ್ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಉದ್ಘಾಟಿಸಿದರು. ಇದೇ ವೇಳೆ ಮುಂದಿನ ಹತ್ತು ವರ್ಷಗಳ ಅವಧಿಗೆ 28,840 ಕೋಟಿ ರೂ. ಅನುದಾನ ಹೊಂದಿರುವ ಪರಿಷ್ಕೃತ ಉಡಾನ್ ಯೋಜನೆಗೂ ಅಧಿಕೃತ ಚಾಲನೆ ನೀಡಿದರು.
ಪ್ರಧಾನಿ ಮೋದಿ ಜೋಧ್ಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ರಾಜಸ್ಥಾನ ರಾಜ್ಯಪಾಲ ಹರಿಭಾವು ಬಾಗಡೆ, ಕೇಂದ್ರ ಜಲಶಕ್ತಿ ಸಚಿವ ಹಾಗೂ ಜೋಧ್ಪುರ ಸಂಸದ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಮುಖ್ಯಮಂತ್ರಿ ಭಜನಲಾಲ್ ಶರ್ಮಾ ಸೇರಿದಂತೆ ಹಲವು ಗಣ್ಯರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಬಳಿಕ ಪ್ರಧಾನಿ ಮೋದಿ ರಿಮೋಟ್ ಬಟನ್ ಒತ್ತುವ ಮೂಲಕ ನೂತನ ಟರ್ಮಿನಲ್ ಕಟ್ಟಡದ ಉದ್ಘಾಟನಾ ಫಲಕವನ್ನು ಅನಾವರಣಗೊಳಿಸಿದರು. ನಂತರ ಅವರು ಟರ್ಮಿನಲ್ ಕಟ್ಟಡದ ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ಪ್ರಯಾಣಿಕರಿಗಾಗಿ ಕಲ್ಪಿಸಲಾಗಿರುವ ಆಧುನಿಕ ಸೌಲಭ್ಯಗಳನ್ನು ಪರಿಶೀಲಿಸಿದರು.
ಸುಮಾರು 480 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ನೂತನ ಟರ್ಮಿನಲ್ ಕಟ್ಟಡವು 23 ಸಾವಿರ ಚದರ ಮೀಟರ್ಗಿಂತಲೂ ಹೆಚ್ಚಿನ ವಿಸ್ತೀರ್ಣ ಹೊಂದಿದೆ. ವರ್ಷಕ್ಕೆ 20 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಈ ಟರ್ಮಿನಲ್ ಹೊಂದಿದ್ದು, ಭವಿಷ್ಯದ ಪ್ರಯಾಣಿಕರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ.
ಪ್ರಯಾಣಿಕರಿಗೆ ಸುಗಮ ಮತ್ತು ಆರಾಮದಾಯಕ ಸೇವೆ ಒದಗಿಸುವ ಉದ್ದೇಶದಿಂದ ಟರ್ಮಿನಲ್ನಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವಿಶಾಲ ನಿರೀಕ್ಷಣಾ ಕೊಠಡಿಗಳು, ಸುಧಾರಿತ ಚೆಕ್-ಇನ್ ವ್ಯವಸ್ಥೆ, ಭದ್ರತಾ ತಪಾಸಣಾ ವ್ಯವಸ್ಥೆ ಹಾಗೂ ಇತರೆ ಪ್ರಯಾಣಿಕ ಸ್ನೇಹಿ ಸೌಲಭ್ಯಗಳನ್ನು ಅಳವಡಿಸಲಾಗಿದೆ.
ಈ ಟರ್ಮಿನಲ್ನ ವಿನ್ಯಾಸವು ರಾಜಸ್ಥಾನದ ರಾಜಮನೆತನದ ಪರಂಪರೆಯ ವಾಸ್ತುಶಿಲ್ಪದಿಂದ ಸ್ಫೂರ್ತಿ ಪಡೆದಿದೆ. ಸಾಂಪ್ರದಾಯಿಕ ಕಮಾನುಗಳು ಮತ್ತು ಝರೋಖಾಗಳು ಸೇರಿದಂತೆ ರಾಜಸ್ಥಾನಿ ಶೈಲಿಯ ಅಂಶಗಳನ್ನು ಆಧುನಿಕ ವಾಸ್ತುಶಿಲ್ಪದೊಂದಿಗೆ ಸಂಯೋಜಿಸಿ ಕಟ್ಟಡ ನಿರ್ಮಿಸಲಾಗಿದೆ. ಇದರಿಂದ ಟರ್ಮಿನಲ್ಗೆ ವಿಶಿಷ್ಟ ಸಾಂಸ್ಕೃತಿಕ ಗುರುತು ದೊರೆತಿದೆ.
ಪ್ರಧಾನಿ ಮೋದಿ ಅವರ ಭೇಟಿ ಸಂದರ್ಭದಲ್ಲಿ ಸ್ಥಳೀಯ ಜಾನಪದ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ರಾಜಸ್ಥಾನದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ನೃತ್ಯ ಹಾಗೂ ಸಂಗೀತ ಪ್ರದರ್ಶನಗಳು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದವು.
ಇದೇ ವೇಳೆ ಪ್ರಧಾನಿ ಮೋದಿ ಪರಿಷ್ಕೃತ ಉಡಾನ್ ಯೋಜನೆಗೂ ಚಾಲನೆ ನೀಡಿದರು. ಮುಂದಿನ ಹತ್ತು ವರ್ಷಗಳಿಗೆ 28,840 ಕೋಟಿ ರೂ. ಅನುದಾನ ಹೊಂದಿರುವ ಈ ಯೋಜನೆಯು ದೇಶದ ನಾಗರಿಕ ವಿಮಾನಯಾನ ಕ್ಷೇತ್ರದ ಮುಂದಿನ ಹಂತದ ಅಭಿವೃದ್ಧಿಗೆ ವೇಗ ನೀಡುವ ಗುರಿ ಹೊಂದಿದೆ.
ಪರಿಷ್ಕೃತ ಉಡಾನ್ ಯೋಜನೆಯು ಪ್ರಾದೇಶಿಕ ವಿಮಾನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವುದು, ಸಣ್ಣ ಮತ್ತು ಮಧ್ಯಮ ನಗರಗಳಿಗೆ ವಿಮಾನ ಸೇವೆಯನ್ನು ವಿಸ್ತರಿಸುವುದು, ವಿಮಾನ ಪ್ರಯಾಣವನ್ನು ಸಾಮಾನ್ಯ ಜನರಿಗೆ ಇನ್ನಷ್ಟು ಕೈಗೆಟುಕುವಂತೆ ಮಾಡುವುದು ಹಾಗೂ ದೇಶದಾದ್ಯಂತ ಸಮಗ್ರ ಮತ್ತು ಸುಸ್ಥಿರ ವಿಮಾನ ಸಂಪರ್ಕವನ್ನು ನಿರ್ಮಿಸುವುದಕ್ಕೆ ಆದ್ಯತೆ ನೀಡಲಿದೆ.
ಅಧಿಕಾರಿಗಳ ಪ್ರಕಾರ, ಜೋಧ್ಪುರ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ರಾಜ್ಯದ ವಿಮಾನಯಾನ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ಪ್ರವಾಸೋದ್ಯಮ, ವ್ಯಾಪಾರ-ವಹಿವಾಟು ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ. ಇದರೊಂದಿಗೆ ಉದ್ಯೋಗಾವಕಾಶಗಳು ಹೆಚ್ಚುವ ನಿರೀಕ್ಷೆಯೂ ಇದೆ.
ಈ ಕಾರ್ಯಕ್ರಮದಲ್ಲಿ ಉಡಾನ್ ಯೋಜನೆಯ ಸಾಧನೆಗಳು ಹಾಗೂ ಇದುವರೆಗೆ ಸಾಧಿಸಿರುವ ಪ್ರಗತಿಯನ್ನೂ ಪರಿಚಯಿಸಲಾಯಿತು. ಹೊಸ ಟರ್ಮಿನಲ್ ಆರಂಭದಿಂದ ಜೋಧ್ಪುರಕ್ಕೆ ಉತ್ತಮ ವಿಮಾನ ಸಂಪರ್ಕ ದೊರೆಯಲಿದ್ದು, ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ಒದಗಿಸುವ ಜೊತೆಗೆ ರಾಜ್ಯದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಈ ಯೋಜನೆ ಮಹತ್ವದ ಕೊಡುಗೆ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Laxmi News 24×7