ಚಿಕ್ಕೋಡಿ(ಮಾ.25): ಮಹಾರಾಷ್ಟ್ರದಲ್ಲಿ ದಿನನಿತ್ಯ ಕೊರೋನಾ ಭೀತಿ ಹೆಚ್ಚುತ್ತಿರುವ ಹಿನ್ನಲೆ ಮಹಾರಾಷ್ಟ್ರದಲ್ಲಿ ಕೆಲಸಕ್ಕೆಂದು ತೆರಳಿದ್ದ ಬೆಳಗಾವಿ ಜಿಲ್ಲೆಯ ಸಾವಿರಾರು ಜನ ಮರಳಿ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಈಗ ಕೊರೋನಾ ಭೀತಿ ಹೆಚ್ಚಾಗಿದೆ.
ಇಷ್ಟು ದಿನ ಬರಿ ನಗರ ಪ್ರದೇಶಗಳಲ್ಲಿ ಕೊರೋನಾ ಭೀತಿ ತಾಂಡವಾಡುತ್ತಿತ್ತು ದಿನಗಳು ಕಳೆಯುತ್ತಿದ್ದಂತೆ ಅದು ಜಿಲ್ಲಾ ಕೇಂದ್ರಗಳು ಗ್ರಾಮೀಣ ಭಾಗಕ್ಕೂ ಆವರಿಸಿದೆ. ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಕೊರೋನಾ ಪ್ರಕರಣ ಇದುವರೆಗೂ ಪತ್ತೆಯಾಗಿಲ್ಲ. ಆದರೆ, ಜಿಲ್ಲೆಯಲ್ಲಿಗ ಕೊರೋನಾ ಭೀತಿ ಎದುರಾಗಿದೆ. ಅದಕ್ಕೆ ಕಾರಣ ಮಹಾರಾಷ್ಟ್ರದಿಂದ ಆಗಮಿಸುತ್ತಿರುವ ಜನ ಈಗಾಗಲೇ ಮಹಾರಾಷ್ಟ್ರದಲ್ಲಿ ಮಹಾಮಾರಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದೆ.
ಬೆಳಗಾವಿ ಜಿಲ್ಲೆಯ ಗಡಿ ಪ್ರದೇಶದ ಹಳ್ಳಿಗಳ ಸಾವಿರಾರು ಜನ ಪಕ್ಕದ ಪೂನಾ, ಮುಂಬೈ ನಗರಗಳಿಗೆ ಕೆಲಸಕ್ಕೆಂದು ಹೋಗಿದ್ದರು. ಆದರೆ, ಕೇಂದ್ರ ಸರ್ಕಾರ ಲಾಕ್ ಡೌನ್ ಮಾಡಿದೆ, ಮಹಾರಾಷ್ಟ್ರ ಸರ್ಕಾರ ಮಹಾರಾಷ್ಟ್ರವನ್ನ ಸಂಪೂರ್ಣ ಲಾಕ್ ಡೌನ್ ಮಾಡಿದೆ. ಜೊತೆಗೆ ಅಂತರರಾಜ್ಯ ಸಂಪರ್ಕವನ್ನು ಬಂದ್ ಮಾಡಿದೆ. ಇದರಿಂದ ಗಾಬರಿಗೊಳಗಾಗಿರುವ ಜನ ತಮ್ಮ ತಮ್ಮ ಗ್ರಾಮಗಳಿಗೆ ವಾಪಸ್ ಮರಳುತ್ತಿದ್ದಾರೆ.
ಗಡಿಗಳಲ್ಲಿ ಪೊಲೀಸರ ಕಟ್ಟೆಚ್ಚರ ಇದೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಂದ್ ಮಾಡಿದರು ಸಹ ಖಾಸಗಿ ವಾಹನ ಕಾರಗಳನ್ನ ಬಾಡಿ ಪಡೆದು ಜನ ರಾಜ್ಯಕ್ಕೆ ಮರಳುತ್ತಿದ್ದಾರೆ. ಪರಿಣಾಮ ಹಳ್ಳಿಗಳಲ್ಲಿ ನೆಮ್ಮದಿಯಿಂದ ಇದ್ದ ಜನರ ನೆಮ್ಮದಿ ಈಗ ಹಾಳಾಗಿದೆ. ಇನ್ನು ಮಹಾರಾಷ್ಟ್ರದಿಂದ ಬಂದ್ ಜನ ಮನೆಗಳಲ್ಲಿ ಇರದೆ ಸಾರ್ವಜನಿಕವಾಗಿ ಒಡಾಟ ನಡೆಸುತ್ತಿದ್ದು ಜನರಲ್ಲಿ ಇನ್ನಷ್ಟು ಭಯ ಹುಟ್ಟಿಸಿದೆ.
ಇನ್ನು ಗಡಿ ಭಾಗದ ಜನ ಅಂತರ ರಾಜ್ಯದ ರಸ್ತೆಗಳಲ್ಲಿ ಹೆಚ್ವಿನ ಕಟ್ಟೆಚ್ಚರ ವಹಿಸಲು ಆಗ್ರಹಿಸಿದ್ದಾರೆ. ಖಾಸಗಿ ವಾಹನಗಳ ಮೂಲಕ ಜನ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಅಲ್ಲದೇ ಗಡಿ ಗ್ರಾಮದ ಕಚ್ಚಾ ರಸ್ತೆಗಳವಮೂಲಕ ಕೂಡ ಜನ ಗ್ರಾಮಗಳಿಗೆ ಆಗಮಿಸುತ್ತಿದ್ದು ಹೆಚ್ಚಿನ ಪೊಲೀಸ್ ಬಂದೊಬಸ್ತ್ ಒದಗಿಸಿ ಗಡಿಗಳನ್ನ ಸಂಪೂರ್ಣವಾಗಿ ಬಂದ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.