ಹುಕ್ಕೇರಿ : ‘ ಝೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮಹಾನಾಯಕ’ ಧಾರಾವಾಹಿಯಿಂದ ಮರೆತು ಹೋದ ಡಾ. ಬಿ.ಆರ್.ಅಂಬೇಡ್ಕರ್ ಅವರ ಇತಿಹಾಸವನ್ನು ತಿಳಿದುಕೊಳ್ಳುವ ಪ್ರಯತ್ನವಾಗುತ್ತಿದೆ ‘ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ತಾಲ್ಲೂಕಿನ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಅರ್ಜುನ ವಾಡ್ ಗ್ರಾಮದಲ್ಲಿ ಗುರುವಾರ ಮಹಾನಾಯಕ ಬ್ಯಾನರ್ ಉದ್ಘಾಟನೆಗೊಳಿಸಿ ಮಾತನಾಡಿದರು.
‘ ಇಡೀ ಕರ್ನಾಟಕದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ಭಾವಚಿತ್ರವಿರುವ ಪೊಸ್ಟರ್ ಉದ್ಘಾಟನೆಗೊಳಿಸುವ ಪರಂಪರೆ ಮುಂದುವರೆದಿದೆ. ಇದಕ್ಕೆ ಝೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಧಾರಾವಾಹಿ ಕಾರಣ. ಇದರಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ ಅಭಿಮಾನಿಗಳು ಈ ಒಂದು ಕಾರ್ಯವನ್ನು ಮಾಡುವ ಮೂಲಕ ಅಭಿಮಾನ ಮೆರೆಯುತ್ತಿದ್ದಾರೆ’ ಎಂದರು.
‘ ಕಳೆದ 10 ವರ್ಷಗಳ ಹಿಂದೆ ಅರ್ಜುನ ವಾಡ್ ಗ್ರಾಮದಲ್ಲಿ ಈ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅದೇ ರೀತಿ ಇಂದು ಕಾರ್ಯಕ್ರಮ ನಡೆಯುತ್ತಿದೆ. ಇದು ಕೇವಲ ಪೋಸ್ಟರ್ ಗೆ ಮಾತ್ರ ಸಿಮಿತವಾಗಬಾರದು. ಡಾ.ಬಿ.ಆರ್. ಅಂಬೇಡ್ಕರ್ ಅವರ ಹೋರಾಟ, ನಮಗೊಸ್ಕರ ಪಟ್ಟ ನೋವು ದಿನಪ್ರತಿ ನೆನಪಿಗೆ ಬರಬೇಕು’ ಎಂದು ಕಿವಿ ಮಾತು ಹೇಳಿದರು.
‘ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳು, ತತ್ವಾದರ್ಶಗಳನ್ನು ನಿಮ್ಮ ಜೀವನದಲ್ಲಿಯೂ ಸಹ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಕಾರ್ಯಕ್ರಮ ಮಾಡಿರುವುದಕ್ಕೂ ಸಾರ್ಥಕವಾಗಲಿದೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೆಳವಿಯ ಚನ್ನಬಸವ ದೇವರು, ಸುರೇಶ ಹುದ್ದಾರ್, ಬಸವರಾಜ ಕೋಳಿ,ಇಲಾಯಿ ಇನಾಮ್ದಾರ್, ಪಪ್ಪುಗೌಡ ಪಾಟೀಲ, ಸುರೇಶ ತಳವಾರ, ರಮೇಶ ಹುಂಜಿ,ಎಂ.ಎಸ್.ಕುಂದಿ, ಕಿರಣ ರಜಪೂತ, ಪ್ರಕಾಶ ಬಸಾಪುರಿ ಸೇರಿದಂತೆ ಇತರರ ಇದ್ದರು.