ಹಾವೇರಿ: ಕೊರೊನಾ ಎರಡನೇ ಅಲೆಯ ಭಯ ಹೆಚ್ಚಾಗುತ್ತಿರುವ ಹಿನ್ನೆಲೆ, 50 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಮುಟ್ಟಲು ಸ್ಥಳೀಯರು ಹಿಂದೇಟು ಹಾಕಿದ ಘಟನೆ ನಗರದ ಜಾನುವಾರು ಮಾರುಕಟ್ಟೆಯಲ್ಲಿ ನಡೆದಿದೆ.
ಮಾರುಕಟ್ಟೆಯಲ್ಲಿ ಅನಾಥವಾಗಿ ಬಿದ್ದಿದ್ದ ಮೃತದೇಹವನ್ನು ಶವಾಗಾರಕ್ಕೆ ಸಾಗಿಸಲು ಜನ ಹಾಗೂ ವಾಹನಗಳ ಮಾಲೀಕರು ಹಿಂದೇಟು ಹಾಕಿದರು. ಬಳಿಕ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್ ನೆರವಿನಿಂದ ಪೊಲೀಸರು ಮೃತದೇಹವನ್ನು ಶವಾಗಾರಕ್ಕೆ ರವಾನೆ ಮಾಡಿದರು. ಪೊಲೀಸರು ಆಟೋ ಚಾಲಕನ ಮನವೊಲಿಸಿ ಮೃತದೇಹವನ್ನು ಶವಾಗಾರಕ್ಕೆ ಕೊಂಡೊಯ್ದರು. ಬೆಳಗ್ಗೆ 10 ಗಂಟೆಯಿಂದ ಮೃತದೇಹವಿದ್ದರೂ ಯಾರೂ ಸುಳಿದಿರಲಿಲ್ಲ.
ಸಾಮಾಜಿಕ ಕಾರ್ಯಕರ್ತರು, ಆಟೋ ಚಾಲಕ ಮಂಜು ಬ್ಯಾಡಗಿ ಹಾಗೂ ಪೊಲೀಸರು ಸೇರಿ ಮೃತದೇಹವನ್ನು ಶವಗಾರಕ್ಕೆ ಸಾಗಿಸಿದರು. ಸಹಾಯ ಮಾಡುವಂತೆ ಸ್ಥಳದಲ್ಲಿದ್ದವರನ್ನು ಕರೆದರೂ ಯಾರೂ ಆಗಮಿಸಿಲ್ಲ. ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.