ಬೆಂಗಳೂರು,ಡಿ.9- ಸಾರಿಗೆ ನೌಕರರಿಗೆ ಒಂದೇ ಒಂದು ತಿಂಗಳ ವೇತನವನ್ನು ತಡೆ ಹಿಡಿಯದೇ ಸಂಪೂರ್ಣವಾಗಿ ವೇತನ ನೀಡಿದ್ದೇವೆ. ಈ ತಿಂಗಳ ವೇತನವೂ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹೇಳಿದ್ದಾರೆ.
ಶಾಸಕ ಹರ್ಷವರ್ಧನ್ ಡಿ. ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೋವಿಡ್ 19 ಸಂದರ್ಭದಲ್ಲಿ ಸಾರಿಗೆ ಸಂಸ್ಥೆ ದೊಡ್ಡ ಮಟ್ಟದ ನಷ್ಟಕ್ಕೆ ಸಿಲುಕಿತು. ಆದರೂ ನೌಕರರಿಗೆ ತೊಂದರೆಯಾಗದಂತೆ ಸಂಪೂರ್ಣ ವೇತನ ಬಿಡುಗಡೆ ಮಾಡಿದ್ದೇವೆ. ಈ ತಿಂಗಳ ವೇತನ ಮಾತ್ರ ಬಾಕಿಯಿದ್ದು, ಮೂರ್ನಾಲ್ಕು ದಿನಗಳಲ್ಲಿ ಅದು ಕೂಡ ಬಿಡುಗಡೆಯಾಗಲಿದೆ ಎಂದರು.
ಸಾರಿಗೆ ಇಲಾಖೆಯ ,1,30,000 ನೌಕರರಿಗೆ 7 ತಿಂಗಳಿನಿಂದ ಹಣಕಾಸಿನ ಕೊರತೆಯಿಂದಾಗಿ ವೇತನ ನೀಡಲು ಸಾಧ್ಯವಾಗಿರಲಿಲ್ಲ. ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಹಣಕಾಸು ಸಚಿವರೊಂದಿಗೆ ಚರ್ಚಿಸಿ ನಂತರ ವೇತನವನ್ನು ಬಿಡುಗಡೆ ಮಾಡಲಾಯಿತು.
ಶೇ.75-25ರಷ್ಟು ನಾಲ್ಕು ತಿಂಗಳು, ಶೇ.50-50ರಷ್ಟು ಎರಡು ತಿಂಗಳು ವೇತನವನ್ನು ನೀಡಿದ್ದೇವೆ. ನಮ್ಮ ನಿಗಮಗಳು ನಷ್ಟದಲ್ಲಿದ್ದ ಕಾರಣ, ಸರ್ಕಾರದ ವತಿಯಿಂದ ವೇತನವನ್ನು ಕೊಡಲಾಗಿದೆ. ಯಾವುದೇ ನೌಕರರ ವೇತನವನ್ನು ತಡೆ ಹಿಡಿದಿಲ್ಲ ಎಂದು ಸ್ಪಷ್ಟಪಡಿಸಿದರು.