ಬೆಂಗಳೂರು: ಹಿಟ್ ಸಿನಿಮಾಗಳ ನಿರ್ದೇಶಕ ಎಂದೇ ಖ್ಯಾತಿ ಪಡೆದಿರುವ ಯೋಗರಾಜ್ ಭಟ್ ಹಾಗೂ ಶಿವರಾಜ್ ಕುಮಾರ್ ಒಟ್ಟಿಗೆ ಸೇರಿ ಹೊಸ ಸಿನಿಮಾ ಮಾಡುತ್ತಿರುವುದು ತಿಳಿದಿರುವ ವಿಚಾರ. ಇದೀಗ ಈ ಚಿತ್ರದ ಕುರಿತು ಮತ್ತೊಂದು ಅಚ್ಚರಿಯ ಸುದ್ದಿ ಹೊರ ಬಿದ್ದಿದೆ.
ಯೋಗರಾಜ್ ಭಟ್ಟರು ತಮ್ಮ ವಿಶಿಷ್ಟ ಸಿನಿಮಾಗಳ ಮೂಲಕವೇ ಚಂದನವನದಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಹಲವು ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರದ್ದು. ಶಿವರಾಜ್ ಕುಮಾರ್ ಸಹ ಸ್ಟಾರ್ ನಟ ಹೀಗಿರುವಾಗ ಇವರಿಬ್ಬರು ಜೊತೆಗೂಡಿ ಸಿನಿಮಾ ಮಾಡುತ್ತಿರುವುದೇ ಅಭಿಮಾನಿಗಳಲ್ಲಿ ಸಂತಸವನ್ನುಂಟು ಮಾಡಿದೆ. ಇನ್ನೂ ಪ್ರಭುದೇವ ಆಗಮಿಸಿದೆರೆ ಸಿನಿಮಾಗೆ ಇನ್ನೂ ಕಿಕ್ ಇರಲಿದೆ.
ಇತ್ತೀಚಿನ ಅಪ್ಡೇಟ್ ಪ್ರಕಾರ ಯೋಗರಾಜ್ ಭಟ್ರು ಈ ಸಿನಿಮಾದ ಕೆಲಸಗಳನ್ನು ಆರಂಭಿಸಿದ್ದಾರೆ ಎನ್ನಲಾಗಿದೆ. ಇದೆಲ್ಲದರ ಮಧ್ಯೆ ಮತ್ತೊಂದು ಸುದ್ದಿ ಬ್ರೇಕ್ ಆಗಿದ್ದು, ಭಟ್ಟರ ಈ ಸಿನಿಮಾದಲ್ಲಿ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಈ ಮೂಲಕ ತುಂಬಾ ವರ್ಷಗಳ ನಂತರ ಪ್ರಭುದೇವ ಕನ್ನಡಕ್ಕೆ ರೀ ಎಂಟ್ರಿ ಆಗುತ್ತಿದ್ದಾರೆ.
ಡ್ಯಾನ್ಸಿಂಗ್ ಕಿಂಗ್ ಪ್ರಭುದೇವ ಎಂಟ್ರಿ ಸಖತ್ ಸದ್ದು ಮಾಡುತ್ತಿದ್ದು, ಯೋಗರಾಜ್ ಭಟ್ ಮಾತ್ರ ಈ ಕುರಿತು ಮಾತನಾಡಿಲ್ಲ. ಗಾಳಿಪಟ-2 ಚಿತ್ರೀಕರಣದ ವೇಳೆ ಈ ಹಿಂದೆ ಭಟ್ರು ಪ್ರಭುದೇವ ಅವರನ್ನು ಭೇಟಿಯಾಗಿದ್ದರು. ಆಗಲೇ ಈ ಕುರಿತು ಸುದ್ದಿಯಾಗಿತ್ತು. ಈಗಾಲೇ ಪ್ರಭುದೇವ್ ಜೊತೆ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಕಥೆಯನ್ನು ಇಷ್ಟಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ಸಿನಿಮಾದಲ್ಲಿ ನಟಿಸುವ ಬಗ್ಗೆ ಖಚಿತಪಡಿಸಿಲ್ಲವಂತೆ. ಈ ಪ್ರಭುದೇವ ಆಗಮನದ ಸುದ್ದಿ ತಿಳಿದ ಶಿವರಾಜ್ ಕುಮಾರ್ ಹಾಗೂ ಭಟ್ರ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಆದರೆ ಪ್ರಭುದೇವ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡ್ತಾರಾ ಕಾದು ನೋಡಬೇಕಿದೆ.
ನಿರ್ದೇಶಕ ಯೋಗರಾಜ್ ಭಟ್ ಸದ್ಯ ಗಾಳಿಪಟ-2 ಚಿತ್ರದಲ್ಲಿ ಸಖತ್ ಬ್ಯೂಸಿಯಾಗಿದ್ದು, ಇತ್ತ ಶಿವರಾಜ್ ಕುಮಾರ್ ಸಹ ಭಜರಂಗಿ-2 ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಇಬ್ಬರೂ ದಿಗ್ಗಜರು ಫ್ರೀ ಆದಮೇಲೆ ಹೊಸ ಚಿತ್ರದಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನಲಾಗಿದೆ. ಭಜರಂಗಿ-2 ಮಾತ್ರವಲ್ಲದೆ ಶಿವಣ್ಣನ ಕೈಯಲ್ಲಿ ಈಗಾಗಲೇ ಸಾಲು ಸಾಲು ಸಿನಿಮಾಗಳಿವೆ. ಎಲ್ಲ ಚಿತ್ರಗಳು ಪೂರ್ಣಗೊಂಡ ಬಳಿಕ ಯೋಗರಾಜ್ ಭಟ್ ಜೊತೆಗಿನ ಸಿನಿಮಾದಲ್ಲಿ ತೊಡಗುತ್ತಾರೋ ಅಥವಾ ಕಾಲ್ ಶೀಟ್ ನೋಡಿಕೊಂಡು ಸಮಯ ಮಾಡಿಕೊಳ್ಳುತ್ತಾರೋ ಕಾದು ನೋಡಬೇಕಿದೆ.