Home / ಜಿಲ್ಲೆ / ಕಲಬುರ್ಗಿ / ಸಾರ್ವಜನಿಕರು ಮಾಸ್ಕ್‌ ಧರಿಸುವ ಅಗತ್ಯವಿಲ್ಲ: ಶ್ರೀರಾಮುಲು

ಸಾರ್ವಜನಿಕರು ಮಾಸ್ಕ್‌ ಧರಿಸುವ ಅಗತ್ಯವಿಲ್ಲ: ಶ್ರೀರಾಮುಲು

Spread the love

ಕಲಬುರ್ಗಿ: ಕೊರೊನಾ ಸೋಂಕು ಗಾಳಿಯಲ್ಲಿ ಹರಡುವ ಸೂಕ್ಷ್ಮಾಣು ಅಲ್ಲವಾದ್ದರಿಂದ ಸಾರ್ವಜನಿಕರು ಮಾಸ್ಕ್‌ ಧರಿಸುವ ಅಗತ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೊರೊನಾ ಶಂಕಿತರನ್ನು ಭೇಟಿಯಾದವರು ಅಥವಾ ಅವರ ಮನೆಯ ಸುತ್ತಮುತ್ತ ಸುಳಿದಾಡುವವರು ಮಾಸ್ಕ್ ಧರಿಸಬಹುದು. ಉಳಿದವರಿಗೆ ಮಾಸ್ಕ್ ಬೇಕಿಲ್ಲ. ಸ್ವಚ್ಛವಾಗಿ ಸಾಬೂನಿನಿಂದ ಕೈ ತೊಳೆದರೂ ಸಾಕು. ಇಲ್ಲಿ ಕುಳಿತಿರುವ ನಾನು, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಡಾ.ಅವಿನಾಶ್‌ ಜಾಧವ್, ಜಿಲ್ಲಾಧಿಕಾರಿ ಶರತ್, ಸಿಇಒ ಡಾ. ರಾಜಾ ಪಿ. ಅವರು ಮಾಸ್ಕ್ ಧರಿಸಿಯೇ ಇಲ್ಲ. ಕಮಿಷನರ್‌ ಎಂ.ಎನ್‌.ನಾಗರಾಜ ಅವರು ಕೋವಿಡ್‌ 19ನಿಂದ ಮೃತಪಟ್ಟ ವ್ಯಕ್ತಿಯ ಮನೆ ಬಳಿ ಹೋಗಿದ್ದರು. ಹೀಗಾಗಿ, ಸಂಭವನೀಯ ಸೋಂಕು ಬೇರೆಯವರಿಗೆ ಹರಡಬಾರದು ಎಂಬ ಉದ್ದೇಶದಿಂದ ಮಾಸ್ಕ್ ಧರಿಸಿದ್ದಾರಷ್ಟೇ’ ಎಂದರು.
ದುಪ್ಪಟ್ಟು ಬೆಲೆಗೆ ಮಾರಿದರೆ ಕ್ರಮ: ಮಾಸ್ಕ್‌ಗಳನ್ನು ದುಪ್ಪಟ್ಟು ಬೆಲೆಗೆ ಮಾರುವ ಮೆಡಿಕಲ್‌ ಶಾಪ್‌ಗಳ ಲೈಸೆನ್ಸ್‌ಗಳನ್ನು ನಿರ್ದಾಕ್ಷಿಣ್ಯವಾಗಿ ರದ್ದುಗೊಳಿಸಲಾಗುವುದು. ಇದಕ್ಕಾಗಿ ಈಗಾಗಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಮೂರು ದಿನಗಳಲ್ಲಿ ಪ್ರಯೋಗಾಲಯ
ಕೊರೊನಾ ಶಂಕಿತರ ಕಫ, ಗಂಟಲು ದ್ರವದ ಮಾದರಿಗಳ ವರದಿಯನ್ನು ಶೀಘ್ರವಾಗಿ ಪಡೆಯಲು ನಗರದ ಜಿಮ್ಸ್‌ ಆಸ್ಪತ್ರೆಯಲ್ಲಿಯೇ ಮೂರು ದಿನಗಳ ಒಳಗಾಗಿ ಪ್ರಯೋಗಾಲಯ ಆರಂಭಿಸಲಾಗುವುದು. ಇದಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆಯೂ ಸಿಕ್ಕಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಪ್ರಕಟಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸಂಜೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಲ್ಲಿನ ಕೊರೊನಾ ಶಂಕಿತರ ಮಾದರಿಗಳನ್ನು ಬೆಂಗಳೂರಿಗೆ ಕಳಿಸಿ ವರದಿ ಪಡೆಯುವುದು ವಿಳಂಬವಾಗುತ್ತದೆ ಎಂಬ ಉದ್ದೇಶದಿಂದ ಜಿಲ್ಲಾಡಳಿದ ಪ್ರಸ್ತಾವದ ಮೇರೆಗೆ ಪ್ರಯೋಗಾಲಯ ಆರಂಭಕ್ಕೆ ನಿರ್ಧರಿಸಿದ್ದೇವೆ’ ಎಂದರು.
‘ಶ್ರೀಲಂಕಾ, ಸಿಂಗಪುರ, ಯುಎಇ, ನೆದರ್‌ಲ್ಯಾಂಡ್ಸ್‌ ಹಾಗೂ ಅಮೆರಿಕದಿಂದ 16 ಪ್ರವಾಸಿಗಳು ನಗರಕ್ಕೆ ಬಂದಿದ್ದಾರೆ. ಅವರನ್ನು 14 ದಿನಗಳ ನಿಗಾದಲ್ಲಿ ಇರಿಸಲಾಗಿದೆ. ಕೊರೊನಾ ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನನಗೆ ಮುಕ್ತ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಕೊರೊನಾ ಶಂಕಿತರಿಗಾಗಿ ಕಲಬುರ್ಗಿಯ ಇಎಸ್‌ಐ ಆಸ್ಪತ್ರೆಯಲ್ಲಿ 200 ಹಾಸಿಗೆ ವಾರ್ಡ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ತಲಾ 10 ಹಾಸಿಗೆಯ ಅಸ್ಪತ್ರೆಗಳನ್ನು ಸಿದ್ಧಪಡಿಸಲಾಗಿದೆ’ ಎಂದು ಹೇಳಿದರು.
1.10 ಲಕ್ಷ ಮಂದಿಗೆ ತಪಾಸಣೆ: ಬೆಂಗಳೂರು ಹಾಗೂ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಇಲ್ಲಿಯವರೆಗೆ 1.10 ಲಕ್ಷ ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ. 75 ಸಾವಿರ ಪ್ರಯಾಣಿಕರನ್ನು ಬೆಂಗಳೂರು ವಿಮಾನ ನಿಲ್ದಾಣವೊಂದರಲ್ಲೇ ತಪಾಸಿಸಲಾಗಿದೆ. 731 ಜನರ ಕಫದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. 32 ಜನರನ್ನು ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಅವರಲ್ಲಿ 12 ಜನ ಗುಣಮುಖರಾಗಿದ್ದಾರೆ. ಕಲಬುರ್ಗಿಯಲ್ಲಿಯೂ ಕೊರೊನಾ ಶಂಕಿತರನ್ನು ಇರಿಸಿರುವ ವಾರ್ಡ್‌ಗೆ ತೆರಳುವ ವೈದ್ಯರಿಗೆ 80 ಸುರಕ್ಷಾ ಕಿಟ್‌ಗಳನ್ನು ಒದಗಿಸಲಾಗಿದೆ. ಮತ್ತೆ ಈಗ 500 ಕಿಟ್‌ಗಳನ್ನು ಹೆಚ್ಚುವರಿಯಾಗಿ ತರಿಸಲಾಗಿದೆ’ ಎಂದು ವಿವರಿಸಿದರು.
‘ಕೊರೊನಾ ಶಂಕಿತರನ್ನು ನೋಡಿಕೊಳ್ಳಲು ಜಿಲ್ಲಾ ಮಟ್ಟದಲ್ಲಿರುವ ವೈದ್ಯರನ್ನೇ ನಿಯೋಜಿಸಲಾಗುವುದು. ಅಗತ್ಯ ಬಿದ್ದರೆ ಪಕ್ಕದ ಜಿಲ್ಲೆಗಳ ವೈದ್ಯರು ಹಾಗೂ ಸ್ಟಾಫ್‌ ನರ್ಸ್‌ಗಳನ್ನು ನಿಯೋಜಿಸಲಾಗುವುದು.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ