ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಪ್ರೀತಿಯ ಪ್ರತೀಕ್ಷ ಬಂಗಲೆಯ ಒಂದು ಭಾಗವನ್ನು ಕೆಡವಲು ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ (ಬಿಎಂಸಿ) ನಿರ್ಧರಿಸಿದೆ ಎಂದು ಆಂಗ್ಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಅಮಿತಾಬ್ ಮೊದಲು ಖರೀದಿಸಿದ ಬಂಗಲೆ ಇದಾಗಿದ್ದು, ಮುಂಬೈನ ಜುಹು ಪ್ರದೇಶದಲ್ಲಿದೆ.
ರಸ್ತೆ ಅಗಲೀಕರಣಕ್ಕಾಗಿ ಅಮಿತಾಬ್ ಬಚ್ಚನ್ ಬಂಗಲೆಯ ಒಂದು ಭಾಗ ನೆಲಸಮವಾಗಲಿದೆ. ಸಂತಸ ಜ್ಞಾನೇಶ್ವರ ಮಾರ್ಗ್ ರಸ್ತೆಯಲ್ಲಿ ಅಮಿತಾಬ್ ಮನೆ ಇದೆ. ಈ ರಸ್ತೆಯನ್ನು ಅಗಲೀಕರಣ ಮಾಡಲು ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಮುಂದಾಗಿದೆ.
ರಸ್ತೆ ಅಗಲೀಕರಣ ಮಾಡುವುದಾಗಿ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ 2017ರಲ್ಲಿ ನೋಟಿಸ್ ನೀಡಲಾಗಿತ್ತು. ಅಮಿತಾಬ್ ಬಚ್ಚನ್ ಜೊತೆಗೆ ನಿರ್ದೇಶಕ ರಾಜ್ ಕುಮಾರ್ ಹಿರಾನಿ, ಪಂಕಜ್ ಬಾಲಾಜಿ ಮನೆ ಸೇರಿದಂತೆ ಒಟ್ಟು 7 ಮಂದಿ ಸೆಲೆಬ್ರಿಟಿಗೆ ನೋಟಿಸ್ ನೀಡಲಾಗುತ್ತು. ಆದರೆ ಆಗ ಅಗಲೀಕರಣ ಮಾಡಿರಲಿಲ್ಲ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುನ್ಸಿಪಲ್ ಕೌನ್ಸಿಲರ್ ಪರ ವಕೀಲ ತುಲಿಪ್ ಬ್ರಿಯಾನ್ ಮಿರಾಂಡ, “ಬಿಎಂಸಿ 2017ರಲ್ಲಿ ಅಮಿತಾಬ್ ಬಚ್ಚನ್ ಅವರಿಗೆ ನೋಟಿಸ್ ನೋಟಿಸ್ ನೀಡಿದಾಗ ಆ ಭೂಮಿಯನ್ನು ಬಿಎಂಸಿ ಏಕೆ ತೆಗೆದುಕೊಂಡಿಲ್ಲ? ನೋಟಿಸ್ ನೀಡಿದ ನಂತರ ರಸ್ತೆ ಅಗಲೀಕರಣ ಯೋಜನೆಗೆ ಯಾವುದೇ ಮೇಲ್ಮನವಿ ಅಗತ್ಯವಿಲ್ಲ” ಎಂದಿದ್ದಾರೆ.
ಇದೀಗ ಸಿವಿಕ್ ಬಾಡಿ 2017ರ ನೋಟಿಸ್ ಅನುಸರಿಸಲು ಮುಂದಾಗಿದ್ದು, ಶೀಘ್ರದಲ್ಲೇ ಮುಂಬೈನ ಬಚ್ಚನ್ ಅವರ ಮೊದಲ ಬಂಗಲೆಯ ಒಂದು ಭಾಗವನ್ನು ನೆಲಸಮ ಮಾಡಲಿದೆ ಎಂದು ಆಂಗ್ಲ ಮಾಧ್ಯಮ ವರದಿ ಮಾಡಿದೆ.
2020 ರಲ್ಲಿ ನಟಿ ಕಂಗನಾ ರಣಾವತ್ ಅವರ ಬೃಹತ್ ಕಚೇರಿಯ ಒಂದು ಭಾಗವನ್ನು ಮುಂಬೈ ಮಹಾನಗರ ಪಾಲಿಕೆ ನೆಲಸಮ ಮಾಡಿತ್ತು. ಇದರ ವಿರುದ್ಧ ಕಂಗನಾ ಹೈ ಕೋರ್ಟ್ ಮೆಟ್ಟಿಲೇರಿದ್ದು, ನೆಲಸಮ ಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು.