ದಾವಣಗೆರೆ: ಕೋಲಾರ ಜಿಲ್ಲೆ ಮುಳಬಾಗಿಲು ಮೂಲದ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರೊಬೆಷನರಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ 7 ತಿಂಗಳ ಗರ್ಭಿಣಿ ಶಾಮಿಲಿ ಕರೊನಾಗೆ ಬಲಿಯಾದ ದುರ್ಘಟನೆ ಇನ್ನೂ ಹಸಿಯಾಗಿಯೇ ಇದೆ. ಈ ನಡುವೆ ಇಂತಹದ್ದೇ ಮತ್ತೊಂದು ದುರಂತ ಸಂಭವಿಸಿದ್ದು, ಮಹಾಮಾರಿಗೆ 5 ತಿಂಗಳ ಗರ್ಭಿಣಿ ಪೇದೆ ಬಲಿಯಾಗಿದ್ದಾರೆ.
ಮಹಿಳಾ ಪೊಲೀಸ್ ಪೇದೆ ಚಂದ್ರಕಲಾ (34) ಮೃತರು. ದಾವಣಗೆರೆ ಜಿಲ್ಲೆ ಹೊನ್ನಾಳಿ ವೃತ್ತ ಕಚೇರಿಯಲ್ಲಿ ಚಂದ್ರಕಲಾ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ಪತಿ ಓಜಪ್ಪ ಅವರು ಬಸವಾಪಟ್ಟಣ ಪೊಲೀಸ್ ಠಾಣೆ ಪೇದೆ. ಪೊಲೀಸ್ ಇಲಾಖೆಯಲ್ಲಿಯೇ ಕೆಲಸ ಮಾಡುತ್ತಿದ್ದ ದಂಪತಿ ಬಾಳಲ್ಲಿ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇನ್ನು ನಾಲ್ಕು ತಿಂಗಳಲ್ಲಿ ಮುದ್ದಾದ ಮಗುವಿನ ಆಗಮದ ಸಂಭ್ರಮ ಕಳೆಗಟ್ಟಬೇಕಿತ್ತು.
ಆದರೆ 10 ದಿನದ ಹಿಂದೆಯೇ 5 ತಿಂಗಳ ಗರ್ಭಿಣಿ ಚಂದ್ರಕಲಾಗೆ ಕರೊನಾ ಸೋಂಕು ಕಾಣಸಿಕೊಂಡಿತ್ತು. ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ನಾರಾಯಣ ಹೃದಯಾಲಯಕ್ಕೆ ವರ್ಗಾಯಿಸಲಾಗಿತ್ತು. ಗರ್ಭಿಣಿಯಾಗಿದ್ದ ಕಾರಣ ಚಂದ್ರಕಲಾ ಕರೊನಾ ವ್ಯಾಕ್ಸಿನ್ ಹಾಕಿಸಿಕೊಂಡಿರಲಿಲ್ಲ. ಚಿಕಿತ್ಸೆ ಫಲಿಸದೆ ಇಂದು(ಮಂಗಳವಾರ) ಕೊನೆಯುಸಿರೆಳೆದಿದ್ದಾರೆ. ಹೊನ್ನಾಳಿ ತಾಲೂಕಿನ ಮಾರಿಕೊಪ್ಪ ಗ್ರಾಮದಲ್ಲಿ ಮೃತರ ಅಂತ್ರಕ್ರಿಯೆ ನೆರವೇರಿಸಲಾಗಿದೆ.