ಹಾವೇರಿ: ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯಿಂದ ಅಥವಾ ಮೃತದೇಹದಿಂದ ಕೊರೋನಾ ವೈರಸ್ ಹರಡುತ್ತಿದೆಯಾ? ಎಂಬ ಪ್ರಶ್ನೆ ಹಲವರಲ್ಲಿ ಮೂಡಿರುವುದು ಸಹಜ. ಈ ಅನುಮಾನ ಅಥವಾ ಗೊಂದಲಕ್ಕೆ ಇಲ್ಲಿದೆ ಉತ್ತರ.
ಕೊರೋನಾ ಸೋಂಕಿನಿಂದ ಮೃತರಾದ ವ್ಯಕ್ತಿಯ ದೇಹದಲ್ಲಿ ಜೀವಹೋದ ನಾಲ್ಕು ತಾಸಿನವರೆಗೆ ಕೊರೋನಾ ವೈರಸ್ ಜೀವಂತವಾಗಿರುತ್ತದೆ. ನಂತರ ವೈರಸ್ ನಾಶವಾಗುತ್ತದೆ. ಕೊರೋನಾ ವೈರಸ್ ಪರಾವಲಂಬಿ ಜೀವಿಯಾಗಿರುವುದರಿಂದ ಸ್ವಂತವಾಗಿ ಬೆಳೆಯಲು ಅಥವಾ ಜೀವಿಸಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಸೋಂಕಿನಿಂದ ಸತ್ತ ವ್ಯಕ್ತಿಯ ಶವವನ್ನು ನಾಲ್ಕೈದು ತಾಸು ಆಸ್ಪತ್ರೆಯಲ್ಲೇ ಇರಿಸಿ ಸೋಂಕು ನಿವಾರಕ ಔಷಧಿ ಸಿಂಪಡಣೆ ಮಾಡಿ ಮೃತ ದೇಹಕ್ಕೆ ಕೋವಿಡ್ ಸುರಕ್ಷತಾ ಕಿಟ್ನಿಂದ ಪ್ಯಾಕ್ ಮಾಡಲಾಗುತ್ತದೆ.ಕೋವಿಡ್ ಪ್ರಮಾಣಿಕೃತ ನಿಯಮಾವಳಿ ಅನುಸಾರ ಸುರಕ್ಷತಾ ಸಾಧನ ಬಳಸಿ ಸರ್ಕಾರದ ವತಿಯಿಂದಲೇ ಸಂಸ್ಕಾರ ಮಾಡಲಾಗುತ್ತದೆ. ಆರು ಅಡಿ ಗುಂಡಿ ತೋಡಿ ವೈರಸ್ ನಾಶಕ ಔಷಧಿ ಸಿಂಪಡಣೆ ಮಾಡಿ ಆಳದ ಮಣ್ಣಿನಲ್ಲಿ ಹೂಳಲಾಗುತ್ತದೆ. ಈ ಎಲ್ಲ ಸುರಕ್ಷತಾ ಕಾರಣಗಳಿಂದ ಯಾವುದೇ ಕಾರಣಕ್ಕೂ ಮೃತದೇಹದಿಂದ ಕೋವಿಡ್ ವೈರಸ್ ಹರಡುತ್ತದೆ ಎಂಬುದು ಕೇವಲ ತಪ್ಪು ಕಲ್ಪನೆ, ತಪ್ಪು ತಿಳುವಳಿಕೆ, ಕೇವಲ ವದಂತಿ ಅಷ್ಟೆ.
ಮೃತ ದೇಹದಿಂದ ಸೋಂಕು ಹರಡಿರುವ ಪ್ರಕರಣ ನಡೆದಿಲ್ಲ. ಹಾವೇರಿ ಜಿಲ್ಲೆಯಲ್ಲಿ ಕೊರೋನಾದಿಂದ ಮೃತರಾದವರ ದೇಹವನ್ನು ಅತ್ಯಂತ ವೈಜ್ಞಾನಿಕ ಮಾರ್ಗಸೂಚಿ ಅನುಸಾರ ಸಂಸ್ಕಾರ ನಡೆಸಲಾಗುತ್ತದೆ ಎಂದು ಹಾವೇರಿ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ ತಿಳಿಸಿದ್ದಾರೆ.
ಮೃತ ದೇಹಕ್ಕೆ ಪೂಜೆ ಹಾಗೂ ಸ್ನಾನ ಮಾಡಿಸುವ ಹಾಗಿಲ್ಲ. ಮಾರ್ಗಸೂಚಿಯ ಅನುಸಾರ ಕುಟುಂಬದ ಐದು ಸದಸ್ಯರನ್ನು ಕೋವಿಡ್ ಸುರಕ್ಷಾ ಕವಚ ಧರಿಸಿ ಭಾಗವಹಿಸಲು ಅವಕಾಶಮಾಡಿಕೊಡಲಾಗುತ್ತದೆ. ಸಂಸ್ಕಾರ ಕ್ರಿಯೆಗಳನ್ನು ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಅತ್ಯಂತ ಗೌರವಯುತವಾಗಿ ಕೋವಿಡ್ನಿಂದ ಮೃತರಾದ ಎಲ್ಲ ದೇಹಗಳನ್ನು ಸಂಸ್ಕಾರ ಮಾಡಲಾಗಿದೆ.