ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹುಬ್ಬಳ್ಳಿಗೆ ಆಗಮಿಸಿದ ವೇಳೆ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ ಪರಿಣಾಮ 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
ಸಭೆಯಲ್ಲಿ ಸಾಮಾಜಿಕ ಅಂತರ ಪಾಲನೆ ಮಾಡದೇ ಇರುವುದು. ಸರಿಯಾಗಿ ಮಾಸ್ಕ್ ಧರಿಸದೇ ಇರುವುದರಿಂದ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಮಹಾನಗರ ಜಿಲ್ಲಾ ಕಾಂಗ್ರೆಸ್ ಘಟಕಕ್ಕೆ 10 ಸಾವಿರ ರೂಪಾಯಿ ದಂಡ ವಿಧಿಸಿದೆ.
ಮೇ 31 ರಂದು ಸಂಜೆ ಹುಬ್ಬಳ್ಳಿಗೆ ಭೇಟಿ ನೀಡಿದ್ದ ಡಿಕೆ ಶಿವಕುಮಾರ್ ಅವರು ಕೇಶ್ವಾಪುರದ ಸರ್ವೋದಯ ವೃತ್ತದ ಬಳಿಯ ಮದರ್ ತೆರೆಸಾ ಪ್ರತಿಮೆ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಬುಲೆನ್ಸ್, ಕೋವಿಡ್ ಸೇವಾ ವಾಹನ, ಆಕ್ಸಿಜನ್ ಇತ್ಯಾದಿ ಸೌಲಭ್ಯಗಳಿಗೆ ಚಾಲನೆ ನೀಡಿದ್ದರು.
ಈ ವೇಳೆ ಜನಜಂಗುಳಿಯೇ ನೆರೆದಿತ್ತು. ಸಾಮಾಜಿಕ ಅಂತರ ಕಾಪಾಡದ ಹಿನ್ನೆಲೆಯಲ್ಲಿ ಹಾಗೂ ಅನುಮತಿಯಿಲ್ಲದೆ ಬ್ಯಾನರ್, ಬಂಟಿಂಗ್ ಹಾಕಿದ ಆರೋಪದ ಮೇಲೆ ಮಹಾನಗರ ಪಾಲಿಕೆಯಿಂದ 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಅಲ್ಲದೆ ಈ ಸಂಬಂಧ ಪಾಲಿಕೆ ಪರಿಸರ ಎಂಜಿನಿಯರ್ ನಯನ ಪ್ರತಿಕ್ರಿಯಿಸಿ, ಕೋವಿಡ್ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ದಂಡ ವಿಧಿಸಿರುವುದಾಗಿ ತಿಳಿಸಿದ್ದಾರೆ.