ಬೆಂಗಳೂರು, ಸುದ್ದಿಒನ್, ಜೂ.01: ಸಮಾಜವಾದಿ ಸಿದ್ಧಾಂತವನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಂಡು ವಿಭಿನ್ನ, ನೇರ ನಿಷ್ಠೂರತೆ ಕಾರಣಕ್ಕೆ ರಾಜ್ಯ ರಾಜಕಾರಣದಲ್ಲಿ ವರ್ಣರಂಜಿತವಾಗಿದ್ದ ಜೆ.ಹೆಚ್.ಪಟೇಲರು ನಾಡು ಕಂಡ ಅಪರೂಪದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದರು.
ಹೆಚ್.ಡಿ.ದೇವೇಗೌಡರು, ರಾಮಕೃಷ್ಣಹೆಗಡೆ ಅವರೊಂದಿಗೆ ಅತ್ಯಂತ ಸಲಿಗೆಯಿಂದ ಮಾತನಾಡುವ ಶಕ್ತಿ, ವ್ಯಕ್ತಿತ್ವ ಹೊಂದಿದ್ದರು. ಜೊತೆಗೆ ಹಾಸ್ಯಭರಿತ, ನೇರ, ನಿಷ್ಠೂರತೆ ಮಾತು ಹೆಚ್ಚು ಆತ್ಮೀಯರನ್ನಾಗಿಸುತ್ತಿತ್ತು.
ಆದರೆ ನಾಡಿನ ಮುಖ್ಯಮಂತ್ರಿ ಸ್ಥಾನ ಅಲಂಕರಿಸಬೇಕಾದರೆ ಕೆಲ ಅರ್ಹತೆಗಳು ಅನಿವಾರ್ಯವಾಗಿ ಇರಲೇಬೇಕು. ಜೊತೆಗೆ ಕೆಲ ನೀತಿ ನಿಯಮ ಪಾಲಿಸಲೇಬೇಕು.
ಆದರೆ ಕನ್ನಡ ನಾಡಿನಿಂದ ಪ್ರಥಮ ಬಾರಿಗೆ ದೇಶದ ಪ್ರಧಾನ ಮಂತ್ರಿ ಸ್ಥಾನ ಅಲಂಕರಿಸಿದ ಹಿನ್ನೆಲೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರು ನೀಡಿದ ಜಾಹೀರಾತು, ಹಾಗೂ ರಾಜ್ಯಮಟ್ಟದ ಎಲ್ಲ ಪತ್ರಿಕೆಗಳಲ್ಲಿ ಪ್ರಕಟಗೊಂಡ ಲೇಖನದಲ್ಲಿ ಇಂದಿನ ಯುವಕರಿಗೆ ಅಚ್ಚರಿಯನ್ನುಂಟು ಮಾಡುವ 25 ವರ್ಷದ ಹಿಂದಿನ ಪ್ರಸಂಗ ಮುದ್ರಣವಾಗಿದೆ. ಇದು ಇಂದಿನ ಯುವ ರಾಜಕಾರಣಿಗಳಿಗೆ ನಿಜಕ್ಕೂ ಮಾರಕ ಎಂಬುದರಲ್ಲಿ ಅಚ್ಚರಿಯಿಲ್ಲ.
ಅ ಪ್ರಸಂಗ 2018ರಲ್ಲಿ ಹೆಚ್.ಡಿ.ದೇವೇಗೌಡರು ನಾಡಿನ ಖ್ಯಾತ, ಸಜ್ಜನ ಪತ್ರಕರ್ತ ಅನಂತ್ ಚಿನಿವಾರ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದಾರೆಂಬ ಯಥಾವತ್ತು ಪ್ರಸಂಗ ಮಂಗಳವಾರದ ಪತ್ರಿಕೆಗಳಲ್ಲಿ ಮುದ್ರಣಗೊಂಡಿದೆ.
ದೇವೇಗೌಡರು ಹೇಳಿದ್ದು ಎಂಬ ಪ್ರಸಂಗ ಹೀಗಿದೆ:
“””ನಾನು ಪ್ರಧಾನಮಂತ್ರಿಯಾಗಿ ನಿಯೋಜಿತಗೊಂಡಿದ್ದೆ. ಈ ಮನುಷ್ಯನಿಗೆ (ಸಿದ್ದರಾಮಯ್ಯ) ತಾನು ಮುಖ್ಯಮಂತ್ರಿ ಆಗಬೇಕೆಂಬ ವ್ಯಾಮೋಹ ಶುರುವಾಯಿತು. ಕರ್ನಾಟಕ ಭವನದಲ್ಲಿ ಒಂದು ಮಾತುಕತೆಯಾಯಿತು. ನಾನು ಬೊಮ್ಮಾಯಿ, ಶರದ್ ಯಾದವ್ ಜತೆಗೆ ಕೂತಿದ್ದೇವು. ಶರದ್ ಯಾದವ್ ಅವರಿಗೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿಸಬೇಕೆಂಬ ಆಸೆಯಿತ್ತು. ಆಗ ನಾನು ಇದು ಎಲ್ಲಪ್ಪ ಸಾಧ್ಯ? 36 ಮಂದಿ ಲಿಂಗಾಯಿತರು ಶಾಸಕರಿದ್ದಾರೆ, ನಾಲ್ವರು ಮಾತ್ರ ಕುರುಬರು ಇದ್ದಾರೆ. ಜೊತೆಗೆ ವಿರೋಧಿ ಅಲೆಯೂ ಇಲ್ಲ. ಹೆಗಡೆಯವರಿಗೆ ಇನ್ನೂ ಸಿಟ್ಟು ಇದೆ. ಈ ಸರ್ಕಾರವನ್ನು ತೆಗೆಯಲಿಕ್ಕೆ ಅವರು ಕಣ್ಣು ಇಟ್ಟುಕೊಂಡಿದ್ದಾರೆ. ಕೈ ಮುಗಿತೇನೆ, ಆಗೋದಿಲ್ಲ ಅಂತ ಹೇಳಿದೆ. ಈ ಮನುಷ್ಯನಿಗೆ (ಸಿದ್ದರಾಮಯ್ಯ) ಮುಖ್ಯಮಂತ್ರಿ ಆಗಬೇಕೆಂಬ ಹಠ. ನೀನು ಡಿಸಿಎಂ ಆಗು ಮುಂದೆ ಒಳ್ಳೇ ಕಾಲ ಬರುತ್ತೆ ಅಂತ ಹೇಳಿದೆ. ಆದರೂ ನನ್ನ ಮಾತು ಕೇಳಲಿಲ್ಲ. ಮತ್ತೊಂದು ದಿನ ಕರ್ನಾಟಕ ಭವನದಲ್ಲಿ ಮಾತುಕತೆ ಸೇರಿದವು.
ನಾನು ಆಗ ನಿಯೋಜಿತ ಪ್ರಧಾನಿ ಆಗಿದ್ದೇ. ಆದ್ದರಿಂದ ನನಗೆ ಎಸ್.ಪಿ.ಜಿ. ಭದ್ರತೆ ನೀಡಿದ್ದರು. ಕರ್ನಾಟಕ ಭವನಕ್ಕೆ ಪೋಲಿಸರ ಕಾವಲು ಹಾಕಿದ್ದರು.
ನಾನು ಮತ್ತು ಸಿದ್ದರಾಮಯ್ಯ ಒಂದೇಡೆ ಕೂತಿದ್ದೇವು. ಪಟೇಲರು ಕೂಡ ಇದ್ದರು. ಚರ್ಚೆ ಕಾವೇರುತ್ತಿದ್ದಂತೆ ಪಟೇಲ್ ಏಕಾಏಕಿ ತಮ್ಮ ರೂಮಿಗೆ ಹೋಗಿ ಎರಡು ಪೆಗ್ ಹಾಕಿಕೊಂಡು ಬಂದು ಬಂದು ಪಾದರಕ್ಷೆಯನ್ನು ಕೈಯಲ್ಲಿ ಹಿಡಿದು ನಿಂತಿದ್ದರು.
ಆಗ ಎಸ್.ಜಿ.ಪಿ. ಆಫೀಸರ್ ಉಪಾಧ್ಯಾಯ ಎಂಬುವರು ಪಟೇಲರ ಕೈಹಿಡಿದುಕೊಂಡರು”””.
ಇಂತಹದ್ದೊಂದು ಪ್ರಸಂಗ ನಿಜಕ್ಕೂ ರಾಜಕಾರಣ ಇತಿಹಾಸಕ್ಕೆ ಅಷ್ಟೇ ಅಲ್ಲ ಜೆ.ಹೆಚ್.ಪಟೇಲರ ವ್ಯಕ್ತಿತ್ವಕ್ಕೂ ಧಕ್ಕೆ ತರುವಂತದ್ದಾಗಿದೆ.
ನಾಡಿನ ಮುಖ್ಯಮಂತ್ರಿ ಆಗುವರು ಸ್ವಲ್ಪ ಗಂಭೀರತೆ ಅಳವಡಿಸಿಕೊಳ್ಳಬೇಕು. ಇವರೇನೂ ಹಾದಿಬಿದಿಯಲ್ಲಿನ ವ್ಯಕ್ತಿಯಂತವರಲ್ಲ. ಆದರೆ ಪಟೇಲರ ಈ ವರ್ತನೆ ಅದು ನಿಯೋಜಿತ ಪ್ರಧಾನ ಮಂತ್ರಿ ಎದುರು ಕುಡಿದುಕೊಂಡು ಬಂದಿದಷ್ಟೆ ಅಲ್ಲದೇ ಚಪ್ಪಲಿ ಕೈಯಲ್ಲಿಡಿದು ಬಂದಿದ್ದು ಅಕ್ಷಮ್ಯ ಅಪರಾಧ ಮತ್ತು ಕನ್ನಡ ನಾಡಿನ ರಾಜಕಾರಣಕ್ಕೆ ದೊಡ್ಡ ಕಪ್ಪುಚುಕ್ಕೆ ಎಂಬುದರಲ್ಲಿ ಎರಡು ಮಾತಿಲ್ಲ.
ಕನಿಷ್ಠ ಪಕ್ಷ ಇಂತಹ ಘಟನೆ ನಡೆದಿದ್ದರೂ ಅದನ್ನು ಬಹಿರಂಗಪಡೆಸದೆ ನಾಡಿನ ಮರ್ಯಾದೆ ಜೋತೆಗೆ ಪಟೇಲರ ಘನತೆಯನ್ನು ರಕ್ಷಣೆ ಮಾಡಬಹುದಾಗಿತ್ತು.
ಆದರೆ ರಾಜಕೀಯ ಕಾರಣಕ್ಕಾಗಿ ಮತ್ತೊಬ್ಬರನ್ನು ಅವಮಾನಿಸಲೆಂದು ಹೋಗಿ ಸ್ವತಃ ದೇವೇಗೌಡರು ಮತ್ತು ಈ ಪ್ರಸಂಗ ಬರೆದವರು ಸ್ವತಃ ಕನ್ನಡ ನಾಡಿನ ರಾಜಕಾರಣವನ್ನೇ ಅವಮಾನ ಮಾಡಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.
ಕುಡಿದುಕೊಂಡು ಚಪ್ಪಲಿ ಕೈಯಲ್ಲಿ ಹಿಡಿದುಕೊಂಡು ರದ್ದಾಂತ ಮಾಡಿದ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ನಾಡು ಕಂಡಿದ್ದು ದೊಡ್ಡ ದುರಂತವೇ ಆಗಿದೆ ಎಂಬುದು ಇತಿಹಾಸದಲ್ಲಿ ಕಪ್ಪುಗುಡ್ಡವಾಗಿ ದಾಖಲಾಗಲಿದೆ