ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಯಾವದೇ ಆಸ್ಪತ್ರೆಗೆ ತೆರಳಲು ಉಚಿತ ಅಂಬ್ಯುಲೆನ್ಸ್ ಹಾಗು ಕೊರೊನಾದಿಂದ ಮೃತಪಟ್ಟ ಶವ ಸಾಗಿಸಲೂ ಪ್ರತ್ಯೇಕ ವಾಹನದ ಜೊತೆಗೆ ಆಕ್ಸಿಜನ್ ಸಹಿತ ವಾಹನವನ್ನೂ ಉಚಿತ ಸೇವೆ ಮಾಡಲು ಡಾ. ಪದ್ಮಜೀತ್ ನಾಡಗೌಡ ಪಾಟೀಲ ಫೌಂಡೇಶನ್ ಮುಂದಾಗಿದೆ ಎಂದು ಕಾಂಗ್ರೆಸ್ ಮುಖಂಡ ಡಾ. ಪದ್ಮಜೀತ್ ನಾಡಗೌಡ ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತೇರದಾಳ ವಿಧಾನಸಭಾ ಕ್ಷೇತ್ರದ ಸರ್ವ ಜನತೆಗೆ ಉಚಿತವಾಗಿ ಮೂರು ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಕೋವಿಡ್ ಹೊಂದಿದ ರೋಗಿಗಳಿಗೆ ಕಳೆದೊಂದು ತಿಂಗಳಿಂದ ಆಯಾ ಆಸ್ಪತ್ರೆಗಳಿಗೆ ತೆರಳಿ ಪ್ರತಿದಿನ ಉಪಹಾರ, ಊಟ, ನೀರಿನ ವ್ಯವಸ್ಥೆಯನ್ನೂ ನಿರ್ವಹಿಸುತ್ತಿರುವದು ನೆಮ್ಮದಿ ತಂದಿದೆ ಎಂದರು.
ಪ್ರತಿ ಕಿ.ಮೀ.ಗೆ ಕೇವಲ ೨೫ ರೂ..!
ಅಂಬ್ಯುಲೆನ್ಸ್ ವಾಹನವು ತೇರದಾಳ ಕ್ಷೇತ್ರದಾದ್ಯಂತ ಉಚಿತವಾಗಿ ಸೇವೆ ಒದಗಿಸಲಿದ್ದು, ರೋಗಿಗಳಿಗೆ ದೂರದ ಬೆಳಗಾವಿ, ಹುಬ್ಬಳ್ಳಿಗೆ ತೆರಳಲು ಸರ್ಕಾರದ ನಿಯಮಕ್ಕಿಂತಲೂ ೧೦ ಪಟ್ಟು ಕಡಿಮೆ ದರದಲ್ಲಿ ಸೇವೆ ಒದಸುತ್ತಿರುವದೂ ವಿಶೇಷ. ಆಕ್ಸಿಜನ್ ರಹಿತ ಅಂಬ್ಯುಲೆನ್ಸ್ಪ್ರತಿ ಕಿ.ಮೀ.ಗೆ ಕೇವಲ ೨೫ ರೂ. ಹಾಗು ಆಕ್ಸಿಜನ್ ಹೊಂದಿದ ಅಂಬ್ಯುಲೆನ್ಸ್ ಪ್ರತಿ ಗಂಟೆಗೆ ೫೦೦ ರೂ. ಕನಿಷ್ಠ ದರದಲ್ಲಿ ರೋಗಿಗಳಿಗೆ ಸಹಾಯ ಮಾಡುತ್ತಿದೆ.
೯೯೮೬೯-೦೩೩೪೩/೯೯೦೨೮-೯೯೧೭೬ ನಂಬರನ್ನು ಸಂಪರ್ಕಿಸಬಹುದು. ಇದೇ ಸಂದರ್ಭ ಶಂಕರ ಸೊರಗಾಂವಿ, ನೀಲಕಂಠ ಮುತ್ತೂರ, ರಾಮಣ್ಣ ಹುಲಕುಂದ, ದುಂಡಪ್ಪ ಕರಿಗಾರ, ಸಂಜು ಅಮ್ಮಣಗಿ, ಕುಬೇರ ಸಾರವಾಡ, ರವೀಂದ್ರ ಬಾಡಗಿ, ಭೀಮಶಿ ಪಾಟೀಲ, ಕುಮಾರ ಬಿಳ್ಳೂರ ಸೇರಿದಂತೆ ಅನೇಕರಿದ್ದರು.