ಚಿತ್ರದುರ್ಗ : ಕೊರೋನಾ ಸೋಂಕಿನ ಚಿಕಿತ್ಸೆಗೆ ಒಂದೇ ವಾರ್ಡಿನಲ್ಲಿ ದಾಖಲಾಗಿದ್ದ ಮೂವರು ಸೋಂಕಿತರು ಸಾವನ್ನಪ್ಪಿ ಗಂಟೆಗಳೇ ಕಳೆದಿದ್ದವು. ಸೋಂಕಿತರು ಮೃತಪಟ್ಟಿರೋ ಸುದ್ದಿ ತಿಳಿದರೂ ಮೃತ ದೇಹಗಳನ್ನ ಬೇರೆ ಕಡೆಗೆ ಸ್ಥಳಾಂತರ ಮಾಡದೆ ಚಿತ್ರದುರ್ಗ ಜಿಲ್ಲಾ ಕೋವಿಡ್ ಆಸ್ಪತ್ರೆ ಸಿಬ್ಬಂದಿ, ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದರು ಅನ್ನೋ ಆರೋಪಗಳು ಕೇಳಿ ಬಂದಿವೆ. ಈ ದೃಶ್ಯವನ್ನ ಮೊಬೈಲ್ನಲ್ಲಿ ವೀಡಿಯೋ ಮಾಡಿದ ಸೋಂಕಿತ ವಕೀಲರೊಬ್ಬರು ಆಸ್ಪತ್ರೆಯ ಅವ್ಯವಸ್ಥೆಯನ್ನ ಬಯಲು ಮಾಡಿ ಜಿಲ್ಲಾಡಳಿತದ ಬೇಜವಬ್ದಾರಿಯನ್ನ ತೋರಿಸಿ ಛೀಮಾರಿ ಹಾಕಿರುವ ಘಟನೆ ಚಿತ್ರದುರ್ಗ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕೊರೋನಾ ಸೋಂಕಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಸೋಂಕಿನ ವೇಗದ ಪ್ರಮಾಣ ಹೆಚ್ಚಿದಂತೆಲ್ಲಾ ಕೊರೋನಾ ಸೋಂಕಿಗೆ ಬಲಿಯಾಗಿ ಸಾವನ್ನಪ್ಪಿದ ಜನರ ಸಂಖ್ಯೆಯೂ ವೇಗವಾಗಿ ಏರುತ್ತಲಿದೆ.
ಹೀಗಿರುವಾಗ ಚಿತ್ರದುರ್ಗ ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಸಿಲುಕಿ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಅದೆಷ್ಟೋ ಜನರು ಸೋಂಕು ತಗುಲಿದ ಬಳಿಕ ಚಿಕಿತ್ಸೆ ಪಡೆಯೋಕೆ ಆಸ್ಪತ್ರೆಗಳಲ್ಲಿ ಬೆಡ್ಗಳು ಸಿಗದೆ ಹಗಲು ರಾತ್ರಿ ಎನ್ನದೇ ಕ್ಯೂ ನಲ್ಲಿ ನಿಂತು ಕಾಯಬೇಕಿದೆ. ಆದರೂ ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆದರೇ ಜಿಲ್ಲಾ ಕೋವಿಡ್ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ ಅನ್ನೋ ಆರೋಗ್ಯ ಸಿಬ್ಬಂದಿ ಮತ್ತು ಅಧಿಕಾರಿಗಳು ಚಿಕಿತ್ಸೆ ಫಲಿಸದೆ ಮೃತಪಟ್ಟ ರೋಗಿಗಳ ಶವಗಳನ್ನ ಬೇರೆ ಕಡೆಗೆ ಶಿಫ್ಟ್ ಮಾಡದೆ ಮೃತ ದೇಹಗಳ ನಡುವೆಯೇ ಸೋಂಕಿತರನ್ನ ಬಿಟ್ಟು ನಿರ್ಲಕ್ಷ ತೋರಿದ್ದರು.