ಬನಹಟ್ಟಿ : ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಪೊಲೀಸ್ ಠಾಣೆ ವ್ಯಾಪ್ತಿಯ ರಬಕವಿಯ ವಿದ್ಯಾನಗರದಲ್ಲಿ ಗುರುವಾರ ಸಂಜೆ ಹೊತ್ತು ಯುವತಿಯೊಬ್ಬಳು ಮನೆಯಲ್ಲಿಯೇ ತೀವ್ರ ಅಸ್ವಸ್ಥಗೊಂಡ ಪರಿಣಾಮ ಖಾಸಗಿ ಆಸ್ಪತ್ರೆಗೆ ತೆರಳಿದಾಗ ಮೃತಪಟ್ಟಿರುವದಾಗಿ ತಿಳಿದುಬಂದಿದೆ.
ರಬಕವಿಯ ರಶ್ಮಿ ಕಿರಣ ಜುಗಳಿ(28) ಮೃತಪಟ್ಟ ದುರ್ದೈವಿಯಾಗಿದ್ದಾಳೆ. ಯುವತಿಯನ್ನು ಹತ್ಯೆ ಮಾಡಿದ್ದು, ಕುತ್ತಿಗೆ ಭಾಗದಲ್ಲಿ ಬಲವಾದ ಕಲೆ ಇರುವದಾಗಿ ಮೃತಳ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.
ಗಂಡನ ಮನೆಯಲ್ಲಿ ಹಲವು ದಿನಗಳಿಂದ ವರದಕ್ಷಿಣೆಗಾಗಿ ಕಿರುಕುಳ ಹಾಗು ಇತರೆ ತೊಂದರೆ ನೀಡುತ್ತಿದ್ದರು. ದಿನ ನಿತ್ಯ ಹೊಡೆದು ಹಿಂಸೆ ಮಾಡುತ್ತಿದ್ದು, ಆತಳ ಗಂಡ, ಮಾವ ಹಾಗು ಅತ್ತಿಗೆ ಸೇರಿ ಕೊಲೆ ಮಾಡಿದ್ದಾರೆಂದು ಮೃತಳ ತಂದೆ ಈರಪ್ಪ ಮೇಗಾಡಿ ದೂರಿನಲ್ಲಿ ದಾಖಲಿಸಿದ್ದಾರೆ.
ಈ ಕುರಿತು ಶುಕ್ರವಾರ ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ಜೆ. ಕರುಣೇಶಗೌಡ ಹಾಗು ಪಿಎಸ್ಐ ವಿಜಯ ಕಾಂಬಳೆ ಆರೋಪಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ತನಿಖೆ ಮುಂದುವರೆಸಿದ್ದಾರೆ. ಮೃತ ರಶ್ನಿಗೆ ಓರ್ವ ಪುತ್ರ, ಪುತ್ರಿ ಇದ್ದಾರೆ.