ಧಾರವಾಡ(ಜು.28): ಧಾರವಾಡ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಹಣವನ್ನು ಬೇರೆಯವರ ಹೆಸರಲ್ಲಿ ಜಮಾ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ತೀವ್ರ ತರಾಟೆ ತೆಗೆದುಕೊಂಡಿದ್ದಾರೆ.ಕೇಂದ್ರ ಸಚಿವ ಪ್ರಹ್ಲಾದ್ ದೆಹಲಿಯಿಂದ ಆನ್ಲೈನ್ಲ್ಲೇ ವಿಡಿಯೋ ಸಂವಾದ ಮೂಲಕ ಧಾರವಾಡ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ದಿಶಾ ಸಭೆ ನಡೆಸಿದರು. ಈ ವೇಳೆ ಜಿಲ್ಲಾ ಪಂಚಾಯತ್ ಸಿಇಒ ವಿರುದ್ಧ ಜೋಶಿ ಗರಂ ಆಗಿದ್ದರು.
ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಹಣದಲ್ಲಿ ಅವ್ಯವಹಾರ ನಡೆದಿದೆ. ಬೇರೆಯವರ ಹೆಸರಲ್ಲಿ ಹಣ ಜಮಾ ಮಾಡಲಾಗಿದೆ ಯಾಕೇ? ಎಂದು ಜೋಶಿ ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಜಿಲ್ಲಾ ಪಂಚಾಯತ್ ಸಿಇಒ, ಪ್ರಗತಿ ವರದಿಯಲ್ಲಿ ಪದಬಳಕೆ ತಪ್ಪಾಗಿದೆ ಎಂದು ಸಮಜಾಯಿಸಿ ನೀಡಲು ಮುಂದಾದರು.
ಇದರಿಂದ ಮತ್ತಷ್ಟು ಗರಂ ಆದ ಕೇಂದ್ರ ಸಚಿವರು, ನನ್ನ ಬಳಿ ಉದ್ಯೋಗ ಖಾತ್ರಿ ಹಣ ದುರುಪಯೋಗ ನಡೆದ ಬಗ್ಗೆ ದಾಖಲೆಗಳಿವೆ ಎಂದು ವಿಡಿಯೋ ಕಾನ್ಫರೆನ್ಸ್ನಲ್ಲಿ ತೋರಿಸಿದರು.
ಧಾರವಾಡ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆದ ಅವ್ಯವಹಾರದ ಬಗ್ಗೆ ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಪಂ ಸಿಇಒಗೆ ಖಡಕ್ ವಾರ್ನಿಂಗ್ ನೀಡಿದರು ಪ್ಲಹ್ಲಾದ್ ಜೋಶಿ.
ಉದ್ಯೋಗ ಖಾತರಿ ಯೋಜನೆಯಲ್ಲಿ, ಕೆಲಸ ಮಾಡಲು ಗ್ರಾಮ ಪಂಚಾಯಿತಿಗೆ ಅಥವಾ ಕಾಯಕ ಬಂಧು ಆಫ್ ಮಿತ್ರದ ಮೂಲಕ ಅರ್ಜಿ ಸಲ್ಲಿಸಬಹುದು. ನರೇಗಾ ಯೋಜನೆಯಡಿ ಪುರುಷರಿಗೆ ಮಾತ್ತು ಮಹಿಳೆಯರಿಗೆ ಪ್ರತಿ ದಿನಕ್ಕೆ 275 ರೂ. ಸಮಾನ ವೇತನ ನೀಡಲಾಗುತ್ತದೆ. ಯಾವುದೇ ಮಧ್ಯವರ್ತಿ ಇಲ್ಲದೆ ಕೂಲಿ ನಿರ್ವಹಿಸಿದವರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ಈ ಎಲ್ಲ ಕಾಮಗಾರಿಗಳು ಕೃಷಿ ಬೆಳವಣಿಗೆಗೆ ಸಂಬಂಧಿಸಿವೆ. ಆದ್ದರಿಂದ ರೈತರು ನರೇಗಾ ಯೋಜನೆಯಡಿ ಬರುವ ಕಾಮಗಾರಿಗಳನ್ನು ಸದುಪಯೋಗ ಪಡಿಸಿಕೊಳ್ಳಬಹುದು.