ಹಾಸನ: ಕರೊನಾ ಎರಡನೆಯ ಅಲೆಯ ಹಿನ್ನೆಲೆಯಲ್ಲಿ ವಿವಾಹ ಸೇರಿದಂತೆ ಎಲ್ಲ ಸಭೆ – ಸಮಾರಂಭಗಳಿಗೆ ಮಾರ್ಗಸೂಚಿ ಹೊರಡಿಸಿ ತಿಂಗಳೇ ಕಳೆದಿದೆ. ಮದುವೆ ಸಮಾರಂಭಗಳಲ್ಲಿ 50 ಜನಕ್ಕಿಂತ ಹೆಚ್ಚಿನ ಮಂದಿ ಇರಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
ಆದರೆ ಜೀವನದಲ್ಲಿ ಒಮ್ಮೆ ಆಗುವ ಮದುವೆಗೆ ಜನರನ್ನು ಕರೆಯದಿದ್ದರೆ ಹೇಗೆ ಎಂದುಕೊಂಡು ತಮಗೇನೂ ಆಗುವುದಿಲ್ಲ ಎಂದುಕೊಂಡು ಅಲ್ಲಲ್ಲಿ ಈ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಮದುವೆಗೆ ಭರ್ಜರಿ ತಯಾರಾಗಿ ಬಂದವರು ಮಾಸ್ಕ್ ಧರಿಸದಿದ್ದರೆ, ಮದುವೆ ಮನೆಯಲ್ಲಿ ಅಂತರವೇಕೆ ಎಂದುಕೊಂಡು ಗುಂಪುಗುಂಪಾಗಿ ಕೂಡಿ ಇರುತ್ತಿದ್ದಾರೆ. ಅಂಥದ್ದೇ ಒಂದು ಘಟನೆ ಹಾಸನದಲ್ಲಿಯೂ ನಡೆದಿದ್ದು, ಇದೀಗ 10 ಸಾವಿರ ರೂಪಾಯಿ ದಂಡ ತೆರಬೇಕಾಗಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ಶ್ರೀ ಸಿಂಗಮ್ಮದೇವಿ ಸಮುದಾಯ ಭವನದಲ್ಲಿ ಇಂದು ನಡೆಯುತ್ತಿದ್ದ ಎರಡು ವಿವಾಹ ಸಮಾರಂಭಗಳಲ್ಲಿ ಮಾರ್ಗಸೂಚಿ ಗಾಳಿಗೆ ತೂರಲಾಗುತ್ತಿದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಕೂಡಲೇ ಶಿರಸ್ತೇದಾರ್ ನೇತೃತ್ವದಲ್ಲಿ ಪೊಲೀಸರು ಛತ್ರದ ಮೇಲೆ ದಾಳಿ ಮಾಡಿದ್ದಾರೆ.
ಹಲವರು ಮಾಸ್ಕ್ ಧರಿಸದಿದ್ದರೆ, ಇನ್ನು ಕೆಲವರು ಸಾಮಾಜಿಕ ಅಂತರವಿಲ್ಲದೆ ಮದುವೆಯಲ್ಲಿ ಭಾಗಿಯಾಗಿದ್ದನ್ನು ಕಂಡಿರುವ ಅಧಿಕಾರಿಗಳು ಗರಂ ಆಗಿದ್ದು, ಎರಡೂ ಕಡೆಯವರಿಗೆ ತಲಾ ಐದೈದು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಮದುವೆ ಹಳ್ಳಿಗಳಲ್ಲಿ ನಡೆಯುತ್ತಿದ್ದು ಅಧಿಕಾರಿಗಳಿಗೆ ತಿಳಿಯುವುದಿಲ್ಲ ಎಂದುಕೊಳ್ಳುವ ತಪ್ಪು ಮಾಡಬೇಡಿ ಎಂಬ ಸಂದೇಶವನ್ನು ಈ ಅಧಿಕಾರಿಗಳು ನೀಡಿದ್ದಾರೆ.