ನಂಜನಗೂಡು: ತಂದೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವಾಪಸ್ ಕರೆದುಕೊಂಡು ಬರುತ್ತಿದ್ದಾಗ, ಕೋವಿಡ್ ನಿಯಮದ ಹೆಸರಿನಲ್ಲಿ ವ್ಯಕ್ತಿಯೊಂದಿಗೆ ಪೊಲೀಸರು ಅಟ್ಟಹಾಸ ಮೆರೆದಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಚಂದ್ರಶೇಖರಯ್ಯ ಎಂಬವರು ಪೊಲೀಸರಿಂದ ನಿಂದನೆಗೆ ಒಳಗಾದ ವ್ಯಕ್ತಿ. ಬಿಪಿ, ಶುಗರ್ ರೋಗಿ ತಂದೆಯನ್ನು ಎಂದಿನಂತೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಹುಲ್ಲಹಳ್ಳಿ ರಸ್ತೆ ಬಳಿ ಆದರ್ಶ ಶಾಲೆ ಬಳಿ ಚಂದ್ರಶೇಖರಯ್ಯ ವಾಪಸ್ ಬೈಕ್ನಲ್ಲಿ ಬರುತ್ತಿದ್ದರು. ಈ ವೇಳೆ ಪೊಲೀಸರು ಬೈಕ್ ತಡೆದು ತಪಾಸಣೆ ನಡೆಸಿದ್ದಾರೆ.
ಕೋವಿಡ್ ನಿಯಮದ ಹೆಸರಿನಲ್ಲಿ ಅಟ್ಟಹಾಸ ಮೆರೆದಿದ್ದಾರೆ ಎನ್ನಲಾಗಿದೆ. ಈ ವೇಳೆ ರೋಗಿ ಸುಸ್ತಾಗಿ ರಸ್ತೆಯಲ್ಲಿ ನರಳಾಡಿರುವ ವಿಡಿಯೋ ವೈರಲ್ ಆಗಿದೆ. ತಂದೆಯನ್ನು ಕರೆತಂದಿದ್ದ ವ್ಯಕ್ತಿ ಪೊಲೀಸರ ವಿರುದ್ಧ ಹರಿಹಾಯ್ದಿದ್ದಾರೆ. ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿ, ನಾನು ಮತ್ತು ನನ್ನ ತಂದೆ ಮೇಲೆ ದರ್ಪ ಮೆರೆದಿದ್ದಾರೆ ಎಂದು ಆರೋಪಿಸಿದ್ದಾರೆ.