ಚಾಮರಾಜನಗರ : ಚಾಮರಾಜನಗರದಲ್ಲಿ ನಿನ್ನೆ ಬುಧವಾರ ಬೆಳಿಗ್ಗೆ 9 ಗಂಟೆಯಿಂದ ಇಂದು ಗುರುವಾರ ಬೆಳಿಗ್ಗೆ 9 ಗಂಟೆಯ ಅವಧಿಯಲ್ಲಿ 15 ಮಂದಿ ಕೋವಿಡ್ ರೋಗಿಗಳು ಮೃತಪಟ್ಟಿದ್ದಾರೆ. ಇದಲ್ಲದೆ ಕೋವಿಡ್ ಅಲ್ಲದ ಆದರೆ ಕೋವಿಡ್ ಲಕ್ಷಣವುಳ್ಳ 5 ಮಂದಿ ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ತಿಳಿಸಿದರು. ಚಾಮರಾಜನಗರದಲ್ಲಿ ಮಾತನಾಡಿದ ಅವರು,
ಇವರ್ಯಾರೂ ಸಹ ಆಕ್ಸಿಜನ್ ಕೊರತೆಯಿಂದ ಸತ್ತಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ಕೊರೋನಾ ರೋಗಿಗಳು ಸತ್ತಿದ್ದಾರೆ. ಇಬ್ಬರು ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಮುಂಚೆಯೇ ಮೃತಪಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದರು.ಮಾಧ್ಯಮಗಳಲ್ಲಿ ಅಕ್ಸಿಜನ್ ಕೊರೆತಯಿಂದ ಸಾವು ಎಂಬ ಸತ್ಯಕ್ಕೆ ದೂರವಾದ ಸುದ್ದಿ ಬರುತ್ತಿದೆ. ಯಾವುದೇ ಸುದ್ದಿಯನ್ನು ಪರಿಶೀಲಿಸಿ ಹಾಕಿ ಎಂದು ಮಾಧ್ಯಮ ಪ್ರತಿನಿಧಿಗಳಲ್ಲಿ ಮನವಿ ಮಾಡಿದ ಸಚಿವರು, ಸದ್ಯಕ್ಕೆ ಜಿಲ್ಲಾಸ್ಪತ್ರೆಯಲ್ಲಿ ಯಾವುದೇ ಆಕ್ಸಿಜನ್ ಕೊರತೆ ಇಲ್ಲ.
1900 ಲೀಟರ್ ಲಿಕ್ವಿಡ್ ಆಕ್ಸಿಜನ್ ಇದೆ. ಇದರ ಜೊತೆಗೆ 122 ಜಂಬೋ ಸಿಲಿಂಡರ್ ಆಕ್ಸಿಜನ್ ಇದೆ. ಇಂದು ಇನ್ನೂ 150 ಸಿಲಿಂಡರ್ ಬರಲಿವೆ ಎಂದು ತಿಳಿಸಿದರು ನಿನ್ನೆ ರಾತ್ರಿ ನಾನೇ ಖುದ್ದಾಗಿ ಮೈಸೂರಿಗೆ ತೆರಳಿ ಪದಕಿ ಹಾಗು ಸದರನ್ ಗ್ಯಾಸ್ ಏಜೆನ್ಸಿಗಳಿಗೆ ಭೇಟಿ ನೀಡಿ ಚಾಮರಾಜನಗರ ಜಿಲ್ಲೆಗೆ ಅಗತ್ಯ ಪ್ರಮಾಣದ ಆಕ್ಸಿಜನ್ ಸಿಲಿಂಡರ್ ಪೂರೈಸುವಂತೆ ತಿಳಿಸಿದ್ದೇನೆ ಎಂದು ಶಿಕ್ಷಣ ಸಚಿವರೂ ಆದ ಸುರೇಶ್ ಕುಮಾರ್ ಹೇಳಿದರು.
ಕೆಸಿ ಜನರಲ್ ಆಸ್ಪತ್ರೆಯಲ್ಲಿ ಉಳಿಯಿತು 200 ಮಂದಿ ಜೀವ; ಡಿಸಿಎಂ ನೇತೃತ್ವದ ಆಪರೇಷನ್ ಆಕ್ಸಿಜನ್ ಯಶಸ್ವಿ
ಚಾಮರಾಜನಗರ ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಹೆಚ್ಚಾಗುತ್ತಿದ್ದು ಈ ಕುರಿತು ವಿಶ್ಲೇಷಣೆಗೆ ಪರಿಣಿತರ ತಂಡವನ್ನು ಕರೆಸಲಾಗುತ್ತಿದೆ. ಈ ಬಗ್ಗೆ ಆರೋಗ್ಯ ಹಾಗು ವೈದ್ಯಕೀಯ ಶಿಕ್ಷಣ ಇಲಾಖೆ ಆಯುಕ್ತರ ಜೊತೆ ಮಾತನಾಡಿದ್ದೇನೆ ಎಂದ ಅವರು,
ಮರಣ ಪ್ರಮಾಣ ಕಡಿಮೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಅಗಾಧ ಪ್ರಮಾಣದ ರೋಗಿಗಳು ಬಂದಾಗ ಸಿಬ್ಬಂದಿ ಕೊರತೆ ಎದುರಾಗುವುದು ಸಹಜ. ಹಾಗಾಗಿ ಈ ಕೊರತೆ ನೀಗಿಸಲು ಜಿಲ್ಲಾಸ್ಪತ್ರೆಗೆ ಅಗತ್ಯ ಪ್ರಮಾಣದ ವೈದ್ಯರು ಹಾಗು ನರ್ಸ್ ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.