ಬೆಂಗಳೂರು: ಡಿಸಿಎಂ ಲಕ್ಷ್ಮಣ ಸವದಿ ದೆಹಲಿ ಭೇಟಿ ತೀವ್ರ ಕುತೂಹಲ ಮೂಡಿಸಿದ್ದು ರಾಜಕೀಯ ಮೊಗಸಾಲೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.
ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ವರ್ಷ ತುಂಬುತ್ತಿದ್ದಂತೆ ದೆಹಲಿಗೆ ಹಾರಿರುವ ಲಕ್ಷ್ಮಣ ಸವದಿ ಇಂದು ಬಿಜೆಪಿ ವರಿಷ್ಠರ ಜೊತೆ ಸಭೆ ನಡೆಸಲಿದ್ದಾರೆ.
ಮೊನ್ನೆಯಷ್ಟೇ ರಾಜ್ಯಪಾಲ ವಜೂಭಾಯ್ ವಾಲಾ ಕರೆಗೆ ಓಗೊಟ್ಟು ಸವದಿ ರಾಜಭವನಕ್ಕೆ ತೆರಳಿದ್ದರು. ಈ ವೇಳೆ ರಾಜ್ಯಪಾಲರು, ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುವಂತೆ ಸವದಿಗೆ ಸೂಚನೆ ನೀಡಿದ್ದರು ಎನ್ನಲಾಗಿದೆ. ಹೀಗಾಗಿ ಸೋಮವಾರ ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನ ಭೇಟಿಯಾಗೋದಾಗಿ ಸವದಿ ತಿಳಿಸಿದ್ದರು. ಅದರಂತೆ ನಿನ್ನೆ ರಾತ್ರಿ ದೆಹಲಿಗೆ ತೆರಳಿದ್ದಾರೆ.
ನಂತರ 2019 ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣೀಕೃತ ಸಚಿವ ರಮೇಶ ಜಾರಕಿಹೊಳಿ ಅವರ ಮನೆಗೆ ಭೇಟಿ ನೀಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮುಂದಿನ ದಿನಗಳಲ್ಲಿ ಭಾರೀ ಬದಲಾವಣೆಗಳು ಆಗಲಿದ್ದು ಪಕ್ಷಕ್ಕೆ ನಿಷ್ಠಾವಂತರಾಗಿರಿ ಎಂದು ಸೂಕ್ಷ್ಮ ರೀತಿಯಲ್ಲಿ ರಮೇಶಗೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಕೋವಿಡ್19 ನಿರ್ವಹಣೆ ಹಾಗೂ ಸರ್ಕಾರ ಎದುರಿಸಿದ ಆರೋಪಗಳ ಬಗ್ಗೆ ಮಾಹಿತಿ ನೀಡಲು ಮತ್ತು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರನ್ನೂ ಭೇಟಿ ಮಾಡಿ, ತಮ್ಮ ಇಲಾಖೆಯ ಕುರಿತು ಚರ್ಚೆ ನಡೆಸಲು ಸವದಿ ದೆಹಲಿಗೆ ತೆರಳಿದ್ದಾರೆ ಎಂದು ಸ್ಪಷ್ಟನೆಯನ್ನೆನೋ ನೀಡುತ್ತಿದ್ದಾರೆ, ಆದ್ರೆ ಸವದಿ ದೆಹಲಿ ಭೇಟಿ ಬಳಿಕ ರಾಜ್ಯ ರಾಜಕೀಯದಲ್ಲಿ ದೊಡ್ಡ ಬದಲಾವಣೆಯೇ ಯಾಗಲಿದೆ ಎನ್ನಲಾಗುತ್ತಿದೆ.
2018 ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದ ಲಕ್ಷ್ಮಣ ಸವದಿ ಅವರಿಗೆ ಡಿಸಿಎಂ ಸ್ಥಾನ ಒಲಿದು ಬಂದಿತ್ತು. ಹೈಕಮಾಂಡ್ ಈ ನಿರ್ಧಾರದಿಂದ ರಾಜ್ಯ ಬಿಜೆಪಿ ನಾಯಕರು ಚಕಿತರಾಗಿದ್ದರು.