ಗೋಕಾಕ: ಕೃಷಿಕರು, ಶ್ರಮಿಕ ವರ್ಗ ಹಾಗೂ ಯುವ ಶಕ್ತಿಯನ್ನು ನಿರ್ಲಕ್ಷಿಸುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರದ ಸರ್ವಾಧಿಕಾರಿತನದಿಂದ ಕೂಡಿರುವ ಪ್ರಧಾನಿ ಮೋದಿ ಸರ್ಕಾರವನ್ನು ಕಿತ್ತೊಗೆಯುವುದೇ ನಮ್ಮ ಹೋರಾಟದ ಧ್ಯೇಯವಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ರೈತ ಮುಖಂಡ ಬಾಬಾಗೌಡ ಪಾಟೀಲ ಗುಡುಗಿದರು.
ಶನಿವಾರ ಇಲ್ಲಿನ ಡಾಲರ್ಸ್ ಕ್ಲಬ್ನಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಚಿಸಿದ ಕೃಷಿ ಸಂಬಂಧಿ ಕಾನೂನುಗಳ ಸಾಧಕ-ಬಾಧಕಗಳ ಪರಾಮರ್ಶಿಸಲು ಸದಾ ಸಿದ್ಧ ಎಂಬ ಬೂಟಾಟಿಕೆಯ ಉತ್ತರ ಹಾಗೂ ಆ ವಿಷಯ ಯಾರೊಂದಿಗೋ ಮಾತನಾಡಲು ಆಹ್ವಾನ ನೀಡುವ ಕೇಂದ್ರ ಸರ್ಕಾರ ಪ್ರಧಾನಿ ಮೋದಿ ಅವರೇ ಏಕೆ ರೈತರೊಂದಿಗೆ ನೇರವಾಗಿ ಮಾತನಾಡಲು ಮುಂದಾಗುತ್ತಿಲ್ಲ ? ಎಂದು ಪ್ರಶ್ನಿಸಿದರು.
ಮಹತ್ವದ ಹುದ್ದೆಗಳಾದ ಆರ್ಥಿಕ ಮತ್ತು ರಸಗೊಬ್ಬರ ಖಾತೆಗಳನ್ನು ನಿರ್ವಹಿಸುವ ಯಾವೊಬ್ಬ ಸಚಿವರಿಗೂ ಅನುಭವವೇ ಇಲ್ಲ.
ಇವರೆಲ್ಲರೂ ಅನನುಭವಿಗಳು. ಇಂಥವರಿಂದಲೇ ಕೇಂದ್ರ ಸರ್ಕಾರ ಬಹುತೇಕ ರಂಗಗಳಲ್ಲೂ ಎಡವುತ್ತಿದೆ ಎಂದರು. ಇದೆ ಏ. 1ರಿಂದ ಅಂಚೆ ಇಲಾಖೆಯ ಬಡ್ಡಿ ಪರಿಷ್ಕರಣೆ ಮತ್ತು ರಸಗೊಬ್ಬರ ದರ ಪ್ರತಿಟನ್ಗೆ ರೂ. 1,200ರಿಂದ ರೂ. 1,900ಕ್ಕೆ ಏರಿಸಿ ಕೈಗೊಂಡ ನಿರ್ಧಾರ ತಪ್ಪಲ್ಲ ಕೇವಲ ಕಣ್ತಪ್ಪಿನಿಂದ ಆಗಿವೆ ಎಂದೆಲ್ಲ ಸಬೂಬು ನೀಡುವ ಈ ಮಂತ್ರಿಗಳು ಸರ್ಕಾರದ ಭಾಗವಾಗಿರಲು ಸಮರ್ಥರೇ ? ಎಂದು ಪ್ರಶ್ನಿಸಿದರು.
ಕೃಷಿಕರು ಆದಿಯಾಗಿ ಜನಸಾಮಾನ್ಯರನ್ನು ದಾರಿ ತಪ್ಪಿಸುವುದೇ ಬಿಜೆಪಿಯ ಚಾಣಿಕ್ಯ ನೀತಿಯೇ ? ಎಂದು ಗೃಹ ಸಚಿವ ಅಮಿತ್ಷಾ ಅವರ ನಡೆಯನ್ನು ಖಾರವಾಗಿ ಪ್ರಶ್ನಿಸಿದರು.
ಪ್ರಸಕ್ತ ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ಮಾತ್ರ ರೈತ ಸಮುದಾಯ ಬಿಜೆಪಿಯನ್ನು ವಿರೋಧಿಸುತ್ತಿದೆಯೇ ? ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವ ಪಕ್ಷ ಇಲ್ಲವೇ ಸರ್ಕಾರ ರೈತಾಪಿ ಸಮುದಾಯವನ್ನು ನಿರ್ಲಕ್ಷಿಸುವುದೋ ಅಂಥವರ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಸ್ಪಷ್ಟಣೆ ನೀಡಿದರು.
ಕಾಂಗ್ರೆಸ್ ಪಕ್ಷವನ್ನು ನೀವು ಬೆಂಬಲಿಸಿದಂತಾಗುತ್ತಿಲ್ಲವೇ ಎಂಬ ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಾಬಾಗೌಡ ಪಾಟೀಲರು, ಗ್ರೌಂಡ ರಿಯಾಲಿಟಿ ಗೊತ್ತಿಲ್ಲದವರು ಅಧಿಕಾರದ ಗದ್ದುಗೆ ಏರಿದರೆ ಏನಾಗುತ್ತದೆ ಎಂಬುದಕ್ಕೆ ಮೋದಿ ಸರ್ಕಾರವೇ ಜ್ವಲಂತ ಉದಾಹರಣೆ ಎಂದು ಪರೋಕ್ಷ ಧಾಟಿಯಲ್ಲಿ ಬಣ್ಣಿಸಿದರು. ಹೀಗಾಗಿ, ನಮ್ಮದು ವಿಷಯ ಆಧಾರಿತ ಹೋರಾಟವೇ ಹೊರತು ಬೇರಾವ ಪಕ್ಷದವರನ್ನು ಮೆಚ್ಚಿಸುವ ಹೋರಾಟ ಅಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಕೃಷಿಕ ಸಮುದಾಯದ ನಾಯಕ ಸಿದ್ದುಗೌಡ ಮೋದಗಿ, ಸಿಐಟಿಯುಸಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿ.ಪಿ.ಕುಲಕರ್ಣಿ, ರೈತ ಮುಖಂಡರುಗಳಾದ ಮಂಜುನಾಥ ಅತ್ತಿ, ಸತೀಶಕುಮಾರ ಹಾಗೂ ಭರಮಣ್ಣ ತೋಳಿ ಮತ್ತಿತರರು ಇದ್ದರು.
ಫೋಟೋ 10 ಜಿಕೆಕೆ-2