Breaking News
Home / Uncategorized / ಎಬಿಡಿ ಸ್ಫೋಟಕ ಆಟ – ಕೊನೆಯ ಎಸೆತದಲ್ಲಿ ಆರ್‌ಸಿಬಿಗೆ ರೋಚಕ ಜಯ

ಎಬಿಡಿ ಸ್ಫೋಟಕ ಆಟ – ಕೊನೆಯ ಎಸೆತದಲ್ಲಿ ಆರ್‌ಸಿಬಿಗೆ ರೋಚಕ ಜಯ

Spread the love

ಚೆನ್ನೈ: ಹರ್ಷಲ್ ಪಟೇಲ್ ಭರ್ಜರಿ ಬೌಲಿಂಗ್,  ಎಬಿಡಿ ವಿಲಿಯರ್ಸ್ ಅವರ ಸ್ಫೋಟಕ ಬ್ಯಾಟಿಂಗ್‍ನಿಂದಾಗಿ ಮುಂಬೈ ವಿರುದ್ಧ ಕೊನೆಯ ಎಸೆತದಲ್ಲಿ ಬೆಂಗಳೂರು ತಂಡ ಜಯವನ್ನು ಸಾಧಿಸಿ ಶುಭಾರಂಭ ಮಾಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 9 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಬೆಂಗಳೂರು 20ನೇ ಓವರಿನ ಕೊನೆಯ ಎಸೆತದಲ್ಲಿ ಒಂದು ರನ್ ಗಳಿಸುವ ಮೂಲಕ ಪಂದ್ಯವನ್ನು 2 ವಿಕೆಟ್‍ಗಳಿಂದ ಗೆದ್ದುಕೊಂಡಿತು.

ಗೆದ್ದದ್ದು ಹೇಗೆ?
14 ಓವರ್ ಅಂತ್ಯಕ್ಕೆ ಜಯಗಳಿಸಲು  36 ಎಸೆತಕ್ಕೆ 57 ರನ್ ಬೇಕಿತ್ತು. 18ನೇ ಓವರ್‌ನಲ್ಲಿ 1 ಸಿಕ್ಸ್, 1 ಬೌಂಡರಿ ಸೇರಿದಂತೆ 15 ರನ್ ಬಂದ ಕಾರಣ ಕೊನೆಯ 12 ಎಸೆತದಲ್ಲಿ 19 ರನ್ ಬೇಕಿತ್ತು. ಬುಮ್ರಾ ಎಸೆದ 19ನೇ ಓವರ್‌ನಲ್ಲಿ ಎಬಿಡಿ ವಿಲಿಯರ್ಸ್ 2 ಬೌಂಡರಿ ಹೊಡೆದ ಪರಿಣಾಮ 12 ರನ್ ಬಂತು. ಕೊನೆಯ 6 ಬಾಲಿಗೆ 7 ರನ್ ಬೇಕಿತ್ತು. ಈ ವೇಳೆ ಜನ್‍ಸೇನ್ ಎಸೆದ ಮೊದಲ ಮೂರು ಎಸೆತಕ್ಕೆ 1, 2, 1 ರನ್ ಬಂತು. 4ನೇ ಎಸೆತದಲ್ಲಿ ಎಬಿಡಿ 2 ರನ್ ಓಡಲು ಹೋಗಿ ರನೌಟ್ ಆದರು. ಕೊನೆಯ 2 ಎಸೆತದಲ್ಲಿ 2 ರನ್ ಬೇಕಿತ್ತು. 5ನೇ ಎಸೆತದಲ್ಲಿ ಲೆಗ್‍ಬೈ ಮೂಲಕ 1 ರನ್ ಬಂದರೆ ಕೊನೆಯ ಎಸೆತದಲ್ಲಿ ಹರ್ಷಲ್ ಪಟೇಲ್ ಶಾರ್ಟ್ ಫೈನ್ ಕಡೆಗೆ ಬಾಲ್ ತಳ್ಳಿ 1 ರನ್ ಗಳಿಸಿ ಆರ್‌ಸಿಬಿ  ತಂಡಕ್ಕೆ ಜಯವನ್ನು ತಂದುಕೊಟ್ಟರು.

ಎಬಿಡಿ ವಿಲಿಯರ್ಸ್ 48 ರನ್(27 ಎಸೆತ, 4 ಬೌಂಡರಿ, 2 ಸಿಕ್ಸರ್), ಗ್ಲೇನ್ ಮ್ಯಾಕ್ಸ್‌ವೆಲ್ 39 ರನ್(28 ಎಸೆತ, 3 ಬೌಂಡರಿ, 2 ಸಿಕ್ಸರ್) ನಾಯಕ ವಿರಾಟ್ ಕೊಹ್ಲಿ 33 ರನ್(29 ಎಸೆತ, 4 ಬೌಂಡರಿ) ಹೊಡೆದು ಔಟಾದರು.

ಈ ಮೊದಲು ಟಾಸ್ ಸೋತು ಬ್ಯಾಟಿಂಗ್ ಇಳಿದ ಮುಂಬೈ ತಂಡಕ್ಕೆ ರೋಹಿತ್ ಶರ್ಮಾ ಮತ್ತು ಕ್ರಿಸ್ ಲೀನ್ ಉತ್ತಮ ಆರಂಭ ಒದಗಿಸಿದರು. ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಕ್ರಿಸ್ ಲೀನ್ 49 ರನ್(35 ಎಸೆತ, 4 ಬೌಂಡರಿ, 3 ಸಿಕ್ಸರ್) ಸಿಡಿಸಿ 1 ರನ್ ನಿಂದ ಅರ್ಧಶತಕ ವಂಚಿತರಾಗಿ ಔಟ್ ಆದರು.

ಈ ಮೊದಲೇ ರೋಹಿತ್ ಶರ್ಮಾ 19 ರನ್(15 ಎಸೆತ, 1 ಬೌಂಡರಿ ಮತ್ತು 1 ಸಿಕ್ಸರ್) ಬಾರಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಸೂರ್ಯಕುಮಾರ್ ಯಾದವ್ ಬಿರುಸಿನ ಬ್ಯಾಟಿಂಗ್ ನಡೆಸಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 31 ರನ್‍ಗೆ ಔಟಾದರು.

ಬಳಿಕ ಬಂದ ಯಾವ ಬ್ಯಾಟ್ಸ್‍ಮ್ಯಾನ್ ಕೂಡ ಹೆಚ್ಚುಹೊತ್ತು ಕ್ರಿಸ್‍ನಲ್ಲಿ ಅಬ್ಬರಿಸಲಿಲ್ಲ. ಇಶಾನ್ ಕಿಶನ್ ಸ್ವಲ್ಪ ಹೊತ್ತು ಬ್ಯಾಟಿಂಗ್ ಪರಾಕ್ರಮ ತೋರಿಸಿದರು ಕೂಡ 28 ರನ್(19 ಎಸೆತ, 2 ಬೌಂಡರಿ, 1 ಸಿಕ್ಸರ್) ಸಿಡಿಸಿ ಆಡುತ್ತಿದ್ದಾಗ ಹರ್ಷಲ್ ಪಟೇಲ್ ಬೌಲಿಂಗ್‍ನಲ್ಲಿ ಎಲ್‍ಬಿ ಬಲೆಗೆ ಬಿದ್ದರು.

ಮಧ್ಯಮ ಕ್ರಮಾಂಕದಲ್ಲಿ ಆಡಲು ಬಂದ ಹಾರ್ದಿಕ್ ಪಾಂಡ್ಯ 13ರನ್, ಕೀರನ್ ಪೋಲಾರ್ಡ್ 7 ರನ್, ಕೃಣಲ್ ಪಾಂಡ್ಯ 7 ರನ್ ಮತ್ತು ಮಾರ್ಕೊ ಜಾನ್ಸೆನ್ ಮತ್ತು ರಾಹುಲ್ ಚಹಾರ್ ಕ್ರಮವಾಗಿ ಸೊನ್ನೆ ಸುತ್ತಿದರು.

ಆರ್‍ಸಿಬಿ ಪರ ಉತ್ತಮ ದಾಳಿ ಸಂಘಟಿಸಿದ ಹರ್ಷಲ್ ಪಟೇಲ್ 4 ಓವರ್ ಎಸೆದು 27 ರನ್ ನೀಡಿ 5 ವಿಕೆಟ್ ಕಿತ್ತು ಮಿಂಚಿದರೆ, ಕೈಲ್ ಜಾಮೀಸನ್ ಮತ್ತು ವಾಷಿಂಗ್ಟ್‍ನ್ ಸುಂದರ್ ತಲಾ ಒಂದು ವಿಕೆಟ್ ಕಿತ್ತರು.


Spread the love

About Laxminews 24x7

Check Also

ರೇವಣ್ಣ ನಡವಳಿಕೆ ಸರಿಯಿಲ್ಲ, ಇಂಗ್ಲೆಂಡ್ ನಲ್ಲೂ ತಗಲಾಕೊಂಡಿದ್ದರು : ಮಾಜಿ ಸಂಸದ ಶಿವರಾಮೇಗೌಡ ಗಂಭೀರ ಆರೋಪ

Spread the loveಮಂಡ್ಯ : ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಾಸಕ ಎಚ್ ಡಿ ರೇವಣ್ಣ ಸಂಕಷ್ಟದಲ್ಲಿದ್ದು ಇದರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ