ನವ ದೆಹಲಿ : 18 ವರ್ಷಕ್ಕಿಂತ ಮೇಲ್ಪಟ್ಟವರು ಯಾರಾದರೂ ತಮಗೆ ಹಿತವೆನ್ನಿಸುವ ಧರ್ಮವನ್ನು ಆರಿಸಲು ಮುಕ್ತರು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಧಾರ್ಮಿಕ ಮತಾಂತರವನ್ನು ತಡೆಯುವ ಉದ್ದೇಶದಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಸೂಚಿಸಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿ ಸುಪ್ರೀಂ ಕೋರ್ಟ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ತಮ್ಮ ಧರ್ಮವನ್ನು ಆಯ್ಕೆ ಮಾಡಲು ಅನುಮತಿಸದೆ ಇರಲು ಯಾವುದೇ ಕಾರಣವಿಲ್ಲ. ನಾವು ಈ ಅರ್ಜಿಗೆ ಅನುಮತಿಯನ್ನು ಕೊಡಲು ಸಾಧ್ಯವಿಲ್ಲ. ಈ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯ ಮೂರ್ತಿಗಳಾದ ಆರ್ ಎಫ್ ನಾರಿಮನ್, ಬಿ.ಆರ್ ಗವಾಯಿ ಹಾಗೂ ಹೃಷಿಕೇಶ್ ರಾಯ್ ಇದ್ದ ತ್ರಿಸದಸ್ಯ ನ್ಯಾಯಪೀಠ ತಿಳಿಸಿದೆ.
ಇನ್ನು, ವಕೀಲ ಶಂಕರನಾರಾಯಣನ್ ತಮಗೆ ಅಪೀಲು ವಾಪಸ್ ಪಡೆಯಲು, ಸರ್ಕಾರ ಹಾಗೂ ಕಾನೂನು ಆಯೋಗಕ್ಕೆ ಮನವಿ ಸಲ್ಲಿಸಲು ಅನುಮತಿ ಕೋರಿದರು. ಆದರೇ, ಅವರ ಅನುಮತಿ ಕೋರಿಕೆಯನ್ನು ಕೂಡ ನ್ಯಾಯಪೀಠ ನಿರಾಕರಿಸಿದೆ.
ಇನ್ನು, ಕಲಂ 51ಎ ಅಡಿಯಲ್ಲಿ, ಮಾಟ ಮಂತ್ರ, ಮೂಡ ನಂಬಿಕೆ ಮತ್ತು ಮೋಸದ ಧಾರ್ಮಿಕ ಮತಾಂತರವನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯಗಳು ವಿಫಲವಾಗಿವೆ ಎಂದು ವಕೀಲ ಅಶ್ವನಿ ಕುಮಾರ್ ದುಬೆ ಅವರ ಮೂಲಕ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿತ್ತು.
ಮತಾಂತರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ, ಕೇಂದ್ರವು ಕನಿಷ್ಟ 3 ವರ್ಷಗಳ ಜೈಲು ಶಿಕ್ಷೆಯನ್ನು 10 ವರ್ಷಗಳವರೆಗೆ ವಿಸ್ತರಿಸಬೇಕು ಮತ್ತು ದಂಡ ವಿಧಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು.