ಚಿಕ್ಕಮಗಳೂರು: ಯಡಿಯೂರಪ್ಪನವರು ನನ್ನ ತಂದೆ, ವಿಜಯೇಂದ್ರ ನನ್ನ ತಮ್ಮನೇ ಆಗಿದ್ದರೂ ಕೂಡ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಗಳು, ವಿಜಯೇಂದ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಸಂಘಟನೆ ಕೆಲಸ ಮಾಡುತ್ತಿದ್ದಾರೆ. ವೈಯಕ್ತಿಕ ಅಲ್ಲದಿದ್ರು ಪಕ್ಷಕ್ಕೆ ಮುಜಗರವಾಗುವಂತಹ ಕೆಲಸ-ಕಾರ್ಯಗಳು ನಡೆಯುತ್ತಿದೆ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ. ಸಮಯ-ಸಂದರ್ಭ ಬಂದಾಗ ಯಾರು-ಯಾವ ತೀರ್ಮಾನ ತೆಗೆದುಕೊಳ್ಳಬೇಕು ತೆಗೆದುಕೊಳ್ತಾರೆ ಎಂದು ಯತ್ನಾಳ್ ವಿರುದ್ಧ ಶಿವಮೊಗ್ಗ ಸಂಸದ ರಾಘವೇಂದ್ರ ಅಸಮಾಧಾನ ಹೊರಹಾಕಿದ್ದಾರೆ.
ಚಿಕ್ಕಮಗಳೂರಿನಲ್ಲಿ ವೀರಶೈವ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಪಕ್ಷ ಎಲ್ಲವನ್ನೂ ಗಮನಿಸುತ್ತಿದೆ. ಚಿಕ್ಕಮಗಳೂರಿನವರೇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಿದ್ದಾರೆ. ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಮುಖಂಡರು ಸಮಯ ಬಂದಾಗ ಉತ್ತರ ಕೊಡುತ್ತಾರೆ, ನಾನು ಸಂಸದ ಹಾಗೂ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದರು.
ವೈಯಕ್ತಿಕ ಅನ್ನೋದಕ್ಕಿಂತ ಪಕ್ಷದ ಮೇಲೂ ಪರಿಣಾಮ ಬೀರುತ್ತೆ. ಯಾವಾಗ ಯಾರು ತೀರ್ಮಾನ ಕೈಗೊಳ್ಳಬೇಕೋ ಅವರು ಕೈಗೊಳ್ಳುತ್ತಾರೆ. ಈಶ್ವರಪ್ಪನವರ ಪತ್ರ ಕುರಿತು ಮಾತನಾಡಿದ ರಾಘವೇಂದ್ರ, ಕಳೆದೊಂದು ವಾರದಿಂದ ಚರ್ಚೆಯಾಗುತ್ತಿದೆ. ಯಾರು ಪ್ರತಿಕ್ರಿಯೆ ಕೊಡಬೇಕೋ ಅವರೇ ಕೊಟ್ಟಿದ್ದಾರೆ. ಈಶ್ವರಪ್ಪನವರೂ ಕೂಡ ಗಮನಕ್ಕೆ ತರುವ ಕೆಲಸ ಮಾಡಿದ್ದೇನೆ ಅಷ್ಟೆ, ಯಡಿಯೂರಪ್ಪನವರೇ ನಮ್ಮ ನಾಯಕರು ಎಂದಿದ್ದಾರೆ. ತಪ್ಪು ಅಭಿಪ್ರಾಯವಾಗಿತ್ತು. ಈಗ ಎಲ್ಲಾ ಸರಿಯಾಗಿದೆ ಎಂದರು.
ಜನ ಪ್ರಜ್ಞಾವಂತರಿದ್ದಾರೆ. ರಾಜ್ಯದ ಕೆಲ ಘಟನೆಗಳು ಬೇರೆ-ಬೇರೆ ಧಿಕ್ಕಿನಲ್ಲಿ ಹೋಗುತ್ತಿದ್ದರೂ ಕೂಡ ಸ್ಟೇಬಲ್ ಗೌರ್ನಮೆಂಟ್ ಒಳ್ಳೆ ಕಾರ್ಯಕ್ರಮ ಮಾಡುತ್ತಿದೆ. ಸಂಕಷ್ಟದ ಸಮಯದಲ್ಲೂ ಒಳ್ಳೆ ಕೆಲಸ ಮಾಡುತ್ತಿರೋ ಈ ಸಂದರ್ಭದಲ್ಲಿ ರಾಜ್ಯದ ಅಭಿವೃದ್ಧಿ ದೃಷ್ಠಿಯಿಂದ ಬಿಜೆಪಿಗೆ ಬೆಂಬಲ ಕೊಡುತ್ತಾರೆ. ಮೋದಿಯವರ ಕೈ ಬಲಪಡಿಸುವ ನಿಟ್ಟಿನಲ್ಲಿ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಹೇಳಿದ್ರು.