ಕೋಲ್ಕತ್ತಾ: ಟಿಎಂಸಿ ಮುಖ್ಯಸ್ಥೆ, ಸಿಎಂ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಮುಖ್ಯಮಂತ್ರಿ ಆಗ್ತಾರೆ ಎಂದು ನಟಿ, ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ಭವಿಷ್ಯ ನುಡಿದಿದ್ದಾರೆ.
ಮಂಗಳವಾರ ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಮತದಾನ ನಡೆಯಲಿದೆ. ಸಮಾಜವಾದಿ ಪಕ್ಷದ ನಾಯಕಿಯಾಗಿರುವ ಜಯಾ ಬಚ್ಚನ್ ಇವತ್ತು ಟಿಎಂಸಿ ಅಭ್ಯರ್ಥಿಗಳ ಪರವಾಗಿ ನಡೆದ ರೋಡ್ ಶೋನಲ್ಲಿ ಭಾಗಿಯಾಗಿ ಮತ ಯಾಚನೆ ಮಾಡಿದರು. ಟಾಲಿಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿಯಿಂದ ಅರುಣ್ ವಿಶ್ವಾಸ್ ಕಣಕ್ಕಿಳಿಸಿದ್ದಾರೆ. ಬಿಜೆಪಿ ಪರವಾಗಿ ಕೇಂದ್ರ ಸಚಿವೆ ಬಬುಲ್ ಸುಪ್ರಿಯೋ ಚುನಾವಣೆ ಮೈದಾನದಲ್ಲಿದ್ದಾರೆ.
ರೋಡ್ ಶೋ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಜಯಾ ಬಚ್ಚನ್, ಪಶ್ಚಿಮ ಬಂಗಾಳದಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿ ಆಗಲಿದೆ. ಅದು ಕೇವಲ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಸಿಎಂ ಆದಾಗ ಮಾತ್ರ ಸಾಧ್ಯ ಎಂದು ಹೇಳಿದರು. ಇತ್ತ ಟಿಎಂಸಿಗೆ ಸಾಥ್ ನೀಡಿದ್ದಕ್ಕೆ ಜಯಾ ಬಚ್ಚನ್ ಮತ್ತು ಸಮಾಜವಾದಿ ಪಾರ್ಟಿಯ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಮಮತಾ ಬ್ಯಾನರ್ಜಿ ಧನ್ಯವಾದ ಸಲ್ಲಿಸಿದ್ದಾರೆ.
ಜಯಾ ಬಚ್ಚನ್ ಕ್ಯಾಂಪೇನ್ ಕುರಿತು ಪ್ರತಿಕ್ರಿಯಿಸಿರುವ ಬಬುಲ್ ಸುಪ್ರಿಯೋ, ಅವರು ನೇರವಾಗಿ ಮಾತನಾಡುವ ನಾಯಕಿ. ಪಕ್ಷಗಳ ಆದೇಶದ ಹಿನ್ನೆಲೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪರವಾಗಿ ಚುನಾವಣೆ ಪ್ರಚಾರ ನಡೆಸುತ್ತಿರಬಹುದು. ಬಚ್ಚನ್ ಕುಟುಂಬದ ಆಪ್ತರಲ್ಲಿ ನಾನು ಒಬ್ಬ. ಕ್ಯಾಂಪೇನ್ ನಲ್ಲಿ ಬಿಜೆಪಿ ವಿರುದ್ಧ ಆರೋಪಗಳನ್ನ ಮಾಡಬಹುದು, ಆದ್ರೆ ನನ್ನ ವಿರುದ್ಧ ಜಯಾಜೀ ಮಾತನಾಡಲಾರು ಎಂದು ಹೇಳಿದ್ದಾರೆ. ಅಭಿಷೇಕ್ ಬಚ್ಚನ್ ಸಿನಿಮಾಗಳ ಹಾಡುಗಳಿಗೆ ಬಬೂಲ್ ಸುಪ್ರಿಯೋ ಧ್ವನಿ ನೀಡಿದ್ದಾರೆ.