ರಾಯಚೂರು: ಏಪ್ರಿಲ್ 17ರಂದು ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಯಾರಿಗೆ ಯೋಗ್ಯತೆ ಇದೆ ಅವರಿಗೆ ಚುನಾವಣಾ ಉಸ್ತುವಾರಿ ಕೊಡುತ್ತಾರೆ. ಉಸ್ತುವಾರಿ ಕೊಡುವ ಜವಾಬ್ದಾರಿ ರಾಜ್ಯಧ್ಯಕ್ಷರದ್ದು ಎಂದು ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಮಸ್ಕಿ ಚುನಾವಣಾ ಉಸ್ತುವಾರಿ ವಹಿಸಿರುವ ಬಿ.ವೈ ವಿಜಯೇಂದ್ರ ಟಾಂಗ್ ಕೊಟ್ಟಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಿರಿಯರಿದ್ದಾರೆ. ಶಾಸಕ ಯತ್ನಾಳ್ ಸಹ ಎಲ್ಲಿಗೆ ಬೇಕಾದರೂ ಹೋಗಬಹುದು. ಎಲ್ಲ ಕಡೆಯೂ ಕಾರ್ಯಕರ್ತರು ಯತ್ನಾಳ್ರನ್ನ ಸ್ವಾಗತಿಸುತ್ತಾರೆ. ಕೆ.ಆರ್ ಪೇಟೆ ಶಿರಾದಲ್ಲಿ ಬಿಜೆಪಿ ಗೆದ್ದ ಮಾದರಿಯಲ್ಲೇ, ಮಸ್ಕಿಯಲ್ಲೂ ಬಿಜೆಪಿ ಗೆಲುವು ನಿಶ್ಚಿತ ಎಂದು ಹೇಳಿದ್ದಾರೆ. ಸದ್ಯಕ್ಕೆ ಕಾಂಗ್ರೆಸ್ ಪರಿಸ್ಥಿತಿ ನೋಡಿದರೆ ಅಯ್ಯೋ ಎಂದೆನಿಸುತ್ತದೆ. ಮತ ಎಣಿಕೆ ದಿನ ಎರಡನೇ ಸುತ್ತಿಗೇ ಕಾಂಗ್ರೆಸ್ನವರು ಮತ ಎಣಿಕೆ ಕೇಂದ್ರವನ್ನು ಖಾಲಿ ಮಾಡುತ್ತಾರೆ ಎಂದು ಹೇಳಿದ್ದಾರೆ.
ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ; ಕ್ಷೇತ್ರದ ಜನ ಮೋದಿ, ಬಿಎಸ್ವೈ ಪರ ಒಲವು ತೋರಿದ್ದಾರೆ: ಸಚಿವ ಶ್ರೀರಾಮುಲು
ಬಳ್ಳಾರಿ: ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಮಸ್ಕಿ ಕ್ಷೇತ್ರದ ಜನರು ಪ್ರಧಾನಿ ಮೋದಿ, ಬಿಎಸ್ವೈ ಪರ ಒಲವು ತೋರಿದ್ದಾರೆ. ಡಿಕೆಶಿ ಕೇವಲ ಸಿಳ್ಳೆ, ಚಪ್ಪಾಳೆಗೆ ಸೀಮಿತವಾಗಿದ್ದಾರೆ. ಹೀಗಾಗಿ, ಕೆಲವರು ಸಿಳ್ಳೆ-ಚಪ್ಪಾಳೆ ಹೊಡೆದರೆ ಗೆಲ್ಲಬಹುದು ಎನ್ನುವ ಭ್ರಮೆಯಲ್ಲಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಇನ್ನೂ 7 ರಿಂದ 8 ವರ್ಷ ಕಾಯಬೇಕು ಎಂದು ಮಾತನಾಡಿದ್ದಾರೆ.
ಕಾಂಗ್ರೆಸ್ ನಾಯಕರು ಮೊದಲು ಅವರ ಕ್ಷೇತ್ರವನ್ನ ಉಳಿಸಿಕೊಳ್ಳಬೇಕು. ಈಶ್ವರಪ್ಪ ರಾಜ್ಯಪಾಲರಿಗೆ ಬರೆದಿರುವ ಪತ್ರದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಈ ಹಿಂದೆ ಎಸ್ಎಂ ಕೃಷ್ಣ, ದೇವೆಗೌಡ ಸಿಎಂ ಇರುವಾಗ ಕೂಡ ಕೆಲವರು ಪತ್ರ ಬರೆದಿದ್ದರು. ಪತ್ರ ಬರೆಯುವುದು ಹೊಸದೇನಲ್ಲ. ಈಶ್ವರಪ್ಪನವರು ಪಕ್ಷದ ಹಿರಿಯ ನಾಯಕರು. ನಾಲ್ಕು ಗೋಡೆ ಮಧ್ಯೆ ಈ ಸಮಸ್ಯೆಯನ್ನ ಪಕ್ಷ ಬಗೆಹರಿಸಲಿದೆ ಎಂದು ಮಾತನಾಡಿದ್ದಾರೆ.