ಮೈಸೂರು:ಬಿಜೆಪಿ ಸರ್ಕಾರ ಬಂದ ಮೇಲೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಒಂದು ಪೈಸೆ ಕೊಡ್ತಿಲ್ಲ. ಎಷ್ಟೇ ಪತ್ರ ಬರೆದರೂ ಹಣ ಕೊಡುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಶಾಸಕ ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದ್ದಾರೆ.ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕ್ಷೇತ್ರದಲ್ಲಿ ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಯತೀಂದ್ರ, ಚುನಾವಣೆ ಸಮಯದಲ್ಲಿ ಕೊಟ್ಟ ಭರವಸೆಗಳನ್ನ ಈಡೇರಿಸಲು ಆಗ್ತಿಲ್ಲ.
ರಸ್ತೆ, ಚರಂಡಿ ಕಾಮಗಾರಿಗೇ ಇವರು ಹಣ ಕೊಡುತ್ತಿಲ್ಲ. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ರಸ್ತೆಗಳು ನಡೆಯುತ್ತವೆ. ಹೀಗಾಗಿ ನಾನು ಪತ್ರ ಬರೆದು ಬರೆದು ಸಾಕಾಗಿದೆ.ನನ್ನ ಕ್ಷೇತ್ರದಲ್ಲಿ ಬೇಡದಿರುವ ಕಾಮಗಾರಿಗಳಿಗೆ ಅನುದಾನ ಕೊಟ್ಟಿದ್ದಾರೆ. ಸಮುದಾಯ ಭವನಗಳಿಗೆ ಹಣ ಕೊಡ್ತಿಲ್ಲ ಎಂದು ದೂರಿದರು.
ಇನ್ನು ಕ್ಷೇತ್ರದಲ್ಲಿ ಮೂರು ಸಾವಿರ ವಸತಿ ಯೋಜನೆ ಮನೆಗಳನ್ನ ಬ್ಲಾಕ್ ಮಾಡಿದ್ದಾರೆ. ಹಣ ನೀಡಿ ಅನ್ ಬ್ಲಾಕ್ ಮಾಡಿ ಅಂದ್ರೆ ಮಾಡ್ತಿಲ್ಲ.ಸಣ್ಣಪುಟ್ಟ ಕೆಲಸ ಮಾಡೋಣ ಅಂದ್ರೆ ಶಾಸಕರ ನಿಧಿಗೂ ಎರಡು ವರ್ಷದಿಂದ ಹಣ ಬಂದಿಲ್ಲ. ಸಿಎಂ ಕುಟುಂಬದವರು ಹೇಳಿದ್ರೆ ಹಣ ರಿಲೀಸ್ ಆಗುತ್ತೆ.
ಶಾಸಕರು ಕೇಳಿದರೆ ಹಣ ಬಿಡುಗಡೆ ಮಾಡ್ತಿಲ್ಲ. ವಿಜಯೇಂದ್ರ ಹೇಳಿದ್ರು ಅಂತ ಕಾಮಗಾರಿ ನಡೆದ ಸ್ಥಳಗಳಿಗೆ ಅನುಧಾನ ಬಿಡುಗಡೆ ಮಾಡಿದ್ರು. ನಾವೆಲ್ಲಾ ಪ್ರತಿಭಟಿಸಿದಾಗ ಬದಲಾಯಿಸಿದ್ರು.ಬೇಡವಾದ ಕಾಮಗಾರಿಗಳಿಗೆ ಅನುದಾನ ನೀಡಿ ಹಣ ಲೂಟಿ ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.