ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಸಮರ್ಪಕವಾಗಿ ಕೆಲಸ ಮಾಡುತ್ತಿದೆ. ಆಡಿಯೋ, ವೀಡಿಯೋ, ಸಿಡಿ ಎಲ್ಲವನ್ನೂ ಪರಿಶೀಲನೆ ನಡೆಸಲಾಗುತ್ತಿದೆ. ಶೀಘ್ರದಲ್ಲಿಯೇ ಸತ್ಯಾಸತ್ಯತೆ ಹೊರಬರಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ನೆನಪಿನ ಶಕ್ತಿ ಕಡಿಮೆ ಆಗಿದೆ. ಮೇಟಿ ಪ್ರಕರಣವನ್ನು ಸಿಐಡಿಗೆ ಕೊಟ್ಟು ಮುಚ್ಚಿ ಹಾಕಿದ್ದರು. ಮೇಟಿ ವಿರುದ್ಧ ಕೇಸ್ ಕೂಡ ದಾಖಲಿಸಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ನಾವು ಯುವತಿ ದೂರು ಕೊಟ್ಟ ಬಳಿಕ ಎಫ್ ಐಆರ್ ದಾಖಲಿಸಿದ್ದೇವೆ. ಅನಗತ್ಯ ಹೇಳಿಕೆಗಳನ್ನು ನೀಡಿ ಪೊಲೀಸರಿಗೆ ಧೈರ್ಯ ಕುಗ್ಗಿಸುವ ಕೆಲಸ ಮಾಡುವುದು ಬೇಡ ಎಂದರು.
ಇನ್ನು ಯುವತಿಗೆ ವಿಚಾರಣೆಗೆ ಹಾಜರಾಗುವಂತೆ 5 ಬಾರಿ ನೋಟೀಸ್ ನೀಡಲಾಗಿದೆ. ರಕ್ಷಣೆ ನಿಡುವುದಾಗಿಯೂ ಹೇಳಿದ್ದೇವೆ. ಆಕೆಯ ಪೋಷಕರಿಗೆ ಈಗಾಗಲೇ ರಕ್ಷಣೆ ನಿಡಿದ್ದೇವೆ. ಹಾಗಾಗಿ ಯುವತಿ ಬಂದು ಹೇಳಿಕೆಗಳನ್ನು ದಾಖಲಿಸಲಿ ಎಂದರು.