ಗುಂಡ್ಲುಪೇಟೆ/ಚಾಮರಾಜನಗರ: ತಾಲ್ಲೂಕಿನ ಚೆನ್ನವಡೆಯನಪುರದಲ್ಲಿ ಶುಕ್ರವಾರ 40ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡಿರುವುದು ಕಲುಷಿತ ನೀರು ಸೇವನೆಯಿಂದಲ್ಲ, ಹಳಸಿದ ಆಹಾರ ಸೇವನೆಯಿಂದ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ಶಂಕೆ ವ್ಯಕ್ತಪಡಿಸಿದ್ದಾರೆ.
ಗ್ರಾಮದ ನಾಗಯ್ಯ ಅವರ ನೂತನ ಮನೆಯ ಗೃಹ ಪ್ರವೇಶ ಸಮಾರಂಭ ಮಾ.25ರಂದು ಗುರುವಾರ ನಡೆದಿದೆ. ಈ ಕಾರ್ಯಕ್ರಮದಲ್ಲಿ ಮಧ್ಯಾಹ್ನದಿಂದ ರಾತ್ರಿವರೆಗೂ ಸುಮಾರು 300 ಜನ ಊಟ ಮಾಡಿದ್ದಾರೆ. ಆದರೆ ರಾತ್ರಿ ವೇಳೆ ಊಟ ಮಾಡಿದ 40 ಜನರಿಗೆ ಮಾತ್ರ ವಾಂತಿಭೇದಿ ಕಾಣಿಸಿಕೊಂಡಿದೆ ಎಂಬುದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ ಎಂದು ರವಿಕುಮಾರ್ ಹೇಳಿದರು.
ಹೊರೆಯಾಲ, ಬೇಗೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದ 40 ಮಂದಿಯು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇಬ್ಬರು ವೈದ್ಯರ ನೇತೃತ್ವದ ಆರೋಗ್ಯ ಸಿಬ್ಬಂದಿ ಗ್ರಾಮದಲ್ಲಿ ಟೀಕಾಣಿ ಹೂಡಿ ಆರೋಗ್ಯ ತಪಾಸಣೆ ನಡೆಸುತ್ತಿದೆ. ಇಂದು ಸಂಜೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ಅವರು ಹೇಳಿದರು.