ಬೆಳಗಾವಿ ಲೋಕಸಭೆ ಸೇರಿ ಉಪಚುನಾವಣೆ ಎದುರಿಸಲು ಕಾಂಗ್ರೆಸ್ ಸಂಪೂರ್ಣ ಸಿದ್ಧ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
ರಾಜ್ಯದಲ್ಲಿ ಏಪ್ರಿಲ್ 17ರಂದು ನಡೆಯಲಿರುವ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷ ಸಿದ್ಧವಾಗಿದೆ. ಬೆಳಗಾವಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಆಯ್ಕೆಗಾಗಿ ಹೈಕಮಾಂಡ್ಗೆ ಶಿಫಾರಸ್ಸು ಕಳುಹಿಸಲಾಗಿದ್ದು, ಆದೇಶಕ್ಕಾಗಿ ಕಾಯಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ತಿಳಿಸಿದರು.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ಕಾಂಗ್ರೆಸ್ ಉಪಚುನಾವಣೆ ಎದುರಿಸಲು ಸನ್ನದ್ಧವಾಗಿದೆ. ಬೆಳಗಾವಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಆಯ್ಕೆಗಾಗಿ ಹೈಕಮಾಂಡ್ಗೆ ಶಿಫಾರಸ್ಸು ಕಳುಹಿಸಲಾಗಿದ್ದು, ಆದೇಶಕ್ಕಾಗಿ ಕಾಯಲಾಗುತ್ತಿದೆ. ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ತಿಳಿಸಿದರು.
ನಾನು ಮುಖ್ಯಮಂತ್ರಿ ರೇಸ್ನಲ್ಲಿ ಇಲ್ಲ. ನಾನು ಗುಡಿ, ಚರ್ಚ್, ಮಸೀದಿಗೆ ಹೋಗಿದ್ದು ಹೊಸದಲ್ಲ. ಜನರು, ಕಾರ್ಯಕರ್ತರು ಕರೆದಲ್ಲಿಗೆ ಹೋಗಬೇಕಾಗುತ್ತದೆ. ಯಾರಿಗೆ ಟಿಕೆಟ್ ಕೊಟ್ಟರೆ ಎನ್ನುವುದು ಚರ್ಚೆಯಾಗಿದೆ. ಅದನ್ನೆಲ್ಲ ನೋಡಿಕೊಂಡೇ ಟಿಕೆಟ್ ನಿರ್ಧಾರ ಆಗಿದೆ. ಪಕ್ಷದ ಆಧಾರದಲ್ಲಿ ಚುನಾವಣೆ ನಡೆಯಲಿದೆ, ಜಾತಿ ಆಧಾರದ ಮೇಲೆ ಅಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಯಮಕನಮರಡಿ ಕ್ಷೇತ್ರಕ್ಕೆ ಯಾರು ಎನ್ನುವುದನ್ನು ಹೇಳಲು ಇನ್ನು ಕಾಲಾವಕಾಶ ಇದೆ. ಅದು ಮೂರನೇ ಹಂತದ ನಿರ್ಧಾರವಾಗಿದೆ. ಉಪಚುನಾವಣೆಗೆ ಅವಕಾಶ ಮಾಡಿಕೊಡುವುದು ಸರಿಯಲ್ಲ ಎನ್ನುವುದು ಒಟ್ಟಾಭಿಪ್ರಾಯವಾಗಿದ್ದರೂ ಪಕ್ಷದ ಹಿತ ದೃಷ್ಟಿಯಿಂದ ಕೆಲವು ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಸಮರ್ಥಿಸಿಕೊಂಡರು.
ಇನ್ನು ಸಿಡಿ ಪ್ರಕರಣದಿಂದ ಶಾಸಕ ರಮೇಶ ಜಾರಕಿಹೊಳಿ ಅವರ ಬೆಂಬಲಿಗರಿಗೆ ಹಿನ್ನೆಡೆಯಾಗಿರಬಹುದು. ಅದಕ್ಕೂ ನಮಗೂ ಸಂಬಂಧವಿಲ್ಲ. ನಮ್ಮ ಬೆಂಬಲಿಗರು ನಮ್ಮ ಜೊತೆಗಿದ್ದಾರೆ. ಪಕ್ಷದ ಪ್ರಚಾರದಲ್ಲಿ ಸಿಡಿ ವಿಚಾರ ಪ್ರಸ್ತಾಪಿಸುವ ಪ್ರಶ್ನೆಯೇ ಇಲ್ಲ. ತನಿಖೆ ನಡೆಯುತ್ತಿದೆ. ದಿನಕ್ಕೊಂದು ಟ್ವೀಸ್ಟ್ ಎಂದು ಮಾಧ್ಯಮದವರೇ ಹೇಳುತ್ತಿದ್ದೀರಿ. ಇನ್ನು ನಾವೇನು ಹೇಳೋಣ ಎಂದು ಶಾಸಕ ಸತೀಶ ಜಾರಕಿಹೊಳಿ ನಸು ನಕ್ಕರು.
ಇನ್ನು ಬಿಜೆಪಿ ಸರಕಾರಗಳ ಜನಹಿತ ನಿರ್ಲಕ್ಷ್ಯವೇ ಕಾಂಗ್ರೆಸ್ ಪ್ರಣಾಳಿಕೆಯ ವಿಷಯವಾಗಿರಲಿದೆ. ರೈತ ಕಾಯ್ದೆ, ಪ್ರವಾಹ ಸಂತ್ರಸ್ತರ ಪರಿಹಾರ, ಸಾರ್ವಜನಿಕ ವಲಯದ ಉದ್ಯಮಗಳ ಖಾಸಗೀಕರಣ ಹೀಗೆ ನಾನಾ ವೈಫಲ್ಯಗಳನ್ನು ಕಾಂಗ್ರೆಸ್ ಜನರ ಮುಂದಿಡಲಿದೆ. ಮೋದಿ ಸರಕಾರ ಮತ್ತು ಯಡಿಯೂರಪ್ಪ ಸರಕಾರವೇ ಕಾಂಗ್ರೆಸ್ ಪ್ರಣಾಳಿಕೆಯ ಟಾರ್ಗೆಟ್ ಎಂದು ಶಾಸಕ ಸತೀಶ ಜಾರಕಿಹೊಳಿ ತಿಳಿಸಿದರು.
ಈ ವೇಳೆ ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ಪಕ್ಷದ ಪ್ರಮುಖರು, ಕಾರ್ಯಕರ್ತರು ಇದ್ದರು.