ಹಾಸನ: ರಸ್ತೆ ಬದಿ ನಿಲ್ಲಿಸಿದ್ದ ಕ್ಯಾಂಟರ್ ವಾಹನ ಹೊತ್ತಿ ಉರಿದ ಪರಿಣಾಮ ಚಾಲಕ ಸಜೀವ ದಹನವಾದ ಘಟನೆ ಹಾಸನ ನಗರದ ಹೊರವಲಯದ ಬಿಟ್ಟಗೌಡನಹಳ್ಳಿಯ ಬೈಪಾಸ್ ರಸ್ತೆಯ ಬಳಿ ನಡೆದಿದೆ.
ತಮಿಳುನಾಡು ಮೂಲದ ಜಮೀರ್(40) ವಾಹನದಲ್ಲಿಯೇ ಸಜೀವ ದಹನಗೊಂಡ ಚಾಲಕ. ಈತ ತಮಿಳುನಾಡಿನಿಂದ ತಂದ ಸರಕನ್ನು ನಿಗದಿತ ಸ್ಥಳಕ್ಕೆ ತಲುಪಿಸಿ ನಂತರ ಬಿಟ್ಟಗೌಡನಹಳ್ಳಿ ವೃತ್ತದ ಬೈಪಾಸ್ ರಸ್ತೆ ಬದಿ ನಿಲ್ಲಿಸಿ ವಾಹನದಲ್ಲಿಯೇ ಮಲಗಿದ್ದಾನೆ. ಬೆಳಗಿನ ಜಾವದಲ್ಲಿ ಚಾಲಕನ ಸೀಟು ಬಳಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯಲ್ಲಿ ಬೆಂದ ರೀತಿ ಚಾಲಕನು ಸೀಟಿನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಸಾವನ್ನಪ್ಪಿರುವ ಚಾಲಕ ಜಮೀರ್ ಮದ್ಯ ಸೇವನೆ ಮಾಡುತ್ತಿದ್ದನು. ಈತ ರಾತ್ರಿ ಮಲಗಿ ಬೆಳಗಿನ ಜಾವದಲ್ಲಿ ಎದ್ದು, ಸಿಗರೇಟ್ ಸೇದಿರಬಹುದು, ಇಲ್ಲವೇ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ಸೊಳ್ಳೆ ಬತ್ತಿ ಹಚ್ಚಿರಬಹುದೆ, ಸ್ಥಳದಲ್ಲಿ ಮೊಬೈಲ್ ಚಾರ್ಜ್ ಹಾಕಿದ್ದು, ಏನಾದರೂ ಮೊಬೈಲ್ ಶಾರ್ಟ್ ಆಗಿರಬಹುದೆ ಎಂಬ ನಾನಾ ಅನುಮಾನಗಳು ಕಂಡು ಬರುತ್ತದೆ. ವಾಹನ ಚಾಲನೆ ಮಾಡುವ ಮುಂದೆ ಒಳ ಭಾಗ ಮಾತ್ರ ಸುಟ್ಟಿದ್ದು, ಉಳಿದ ಭಾಗಗಳಿಗೆ ಯಾವ ಹಾನಿ ಆಗಿರುವುದಿಲ್ಲ. ಬೆಳಿಗ್ಗಿನ ಸಮಯದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಇಲ್ಲಿನ ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಲು ಮುಂದಾದರೂ ಚಾಲಕ ಬದುಕುಳಿಯಲಿಲ್ಲ. ಚಾಲಕನ ಸೀಟಿನಲ್ಲಿ ಕುಳಿತಿರುವಂತೆ ಸಾವನಪ್ಪಿದ್ದಾನೆ. ಹೋಟೆಲ್ ನಿಂದ ಪಾರ್ಸಲ್ ತರಿಸಿದ ಊಟ ಹಾಗೆಯೇ ಇದ್ದು, ಮದ್ಯದ ಬಾಟಲಿ ಕೂಡ ಇತ್ತು ಎನ್ನಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.