ಶಿವಮೊಗ್ಗ: ರಾಜ್ಯದ ಕಾರ್ಯಕರ್ತರು ಮುಖಂಡರ ಮೇಲೆ ಭದ್ರಾವತಿಯಲ್ಲಿ ನಡೆದಂತಹ ಪೊಲೀಸ್ ದೌರ್ಜನ್ಯ ಮುಂದುವರಿದರೆ ರಾಜ್ಯದ ಎಲ್ಲ ಠಾಣೆಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಸಿದರು.
ನಗರದ ಬಿ.ಎಚ್.ರಸ್ತೆಯ ಸೈನ್ಸ್ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿವಮೊಗ್ಗ ಚಲೋ-ಜನಾಕ್ರೋಶ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೋಟಿಗಟ್ಟಲೆ ದುಡ್ಡು ಕೊಟ್ಟು ಶಾಸಕರನ್ನು ಖರೀದಿಸಿದರು. ಲೂಟಿ ಹೊಡೆದು ಆಸ್ತಿ ಮಾಡಿದರು. ಹಾಗಂತ ಅವರೇ ಪೊಲೀಸರಿಗೆ ಸಂಬಳ ಕೊಡುತ್ತಾರಾ? ಸರ್ಕಾರದ ಸಂಬಳ ಪಡೆದವರಿಗೆ ನಾಚಿಕೆಯಾಗಬೇಕು. ಯಡಿಯೂರಪ್ಪ, ಈಶ್ವರಪ್ಪ ಅಥವಾ ಬಿಜೆಪಿ ಕಚೇರಿಯಿಂದ ವೇತನ ನೀಡುವುದಿಲ್ಲ. ಮಾನ, ಮರ್ಯಾದೆ ಇದ್ದವರು ಇಂತಹ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು. ಐಪಿಸಿ ಕಲಂಗಳನ್ನು ಸರಿಯಾಗಿ ಓದಿಕೊಳ್ಳಬೇಕು. ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದರೆ ಯಾವ ಪೊಲೀಸರೂ ತಡೆಯಲು ಸಾಧ್ಯವಿಲ್ಲ. ಸುಳ್ಳು ಕೇಸ್ ಹಾಕ್ತೀರಾ? ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಬೀಕೇರ್ ಫುಲ್’ ಎಂದು ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.