ನಟ ಯಶ್ ಹಾಸನದ ತಿಮ್ಮಾಪುರ ಗ್ರಾಮದಲ್ಲಿ ಹೊಂದಿರುವ ಜಮೀನಿಗೆ ಸಂಬಂಧಿಸಿದಂತೆ ಗ್ರಾಮಸ್ಥರು ಮತ್ತು ಯಶ್ ತಂದೆ-ತಾಯಿ ನಡುವೆ ನಡೆದ ಗಲಾಟೆ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಇವತ್ತು ಸ್ಪಷ್ಟನೆ ಕೊಡೋ ಪ್ರಯತ್ನ ಮಾಡಿದ್ದಾರೆ. ‘ಜಮೀನಿನ ಬಗ್ಗೆ ಯಾರೂ ಭಯಪಡಬೇಕಿಲ್ಲ. ನನಗೂ ಮಾಹಿತಿಯ ಕೊರತೆ ಇದೆ. ಯಶ್ನಿಂದ ಯಾರಿಗೂ ಮೋಸ ಆಗಲ್ಲ. ಈ ಬಗ್ಗೆ ನಾನು ಗ್ರಾಮಸ್ಥರಿಗೆ ಮಾತು ಕೊಡ್ತೀನಿ.
ಹಣ ಮಾಡೋಕೆ ಅಥವಾ ಮಜಾ ಮಾಡ್ಬೇಕು ಅಂತ ಜಮೀನು ಮಾಡಿದ್ದಲ್ಲ. ತಾಯಿ ಊರಿನಲ್ಲಿ ಜಮೀನು ಮಾಡ್ಬೇಕು ಅನ್ನೋ ಆಸೆ ಇತ್ತು. ಆದ್ರೆ ಅಲ್ಲೊಂದು ಸಮಸ್ಯೆ ಇದೆ. ನಮ್ಮ ಜಮೀನಿನ ಮಧ್ಯದಲ್ಲಿ ರಸ್ತೆ ಹೋಗಿದೆ, ಸೈಡಲ್ಲಿ ಹೋಗಿದ್ರೆ ಪರವಾಗಿರಲಿಲ್ಲ. ಮಧ್ಯದಲ್ಲಿ ರಸ್ತೆ ಬಿಟ್ರೆ ಯಾರ್ ಬರ್ತಾರೆ, ಯಾರ್ ಹೋಗ್ತಾರೆ ಗೊತ್ತಾಗಲ್ಲ. ನಮ್ಮ ಜಮೀನಿನ ಪಕ್ಕದಲ್ಲೇ ಸಾರ್ವಜನಿಕ ರಸ್ತೆ ಕೂಡ ಇದೆ. 1953ರಿಂದ ಈವರೆಗಿನ ಎಲ್ಲಾ ದಾಖಲೆಗಳನ್ನ ತೆಗೆಸಿ ನೋಡಿದಾಗ ಅದು ಗೊತ್ತಾಗಿದೆ. ವ್ಯವಸಾಯ ಮಾಡಬೇಕು ಅಂತಿದ್ದೀನಿ. ಅದಕ್ಕಾಗಿ ಕಾಂಪೌಂಡ್ ಹಾಕಿಸ್ತಿದ್ದೀವಿ. ಒಂದ್ವೇಳೆ ಬಂಡಿ ರಸ್ತೆ ಅಂತಿದ್ರೂನೂ ಬಿಡಬಹುದು. ಆದ್ರೆ ಬಂಡಿ ರಸ್ತೆ ಇಲ್ಲ. ನಿನ್ನೆ ಟ್ರೆಂಚ್ ಹೊಡೆಯುವಾಗ ಒಂಚೂರು ಜಾಸ್ತಿ ಹೊಡೆದಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ಆಗಿದೆ. ಇನ್ನೊಬ್ಬರ ಜಾಗದಲ್ಲಿ ರಸ್ತೆ ತೆಗೆದುಕೊಳ್ಳಬೇಕು ಅನ್ನೋದು ನನ್ನ ಉದ್ದೇಶವಲ್ಲ. ಯಾರೂ ಭಯಪಡುವ ಅಗತ್ಯವಿಲ್ಲ. ನನಗೆ ಆ ಕಡೆ ಗಮನ ಕೊಡೋಕೆ ಸಮಯ ಇಲ್ಲ. ಸ್ವಲ್ಪ ತಿಂಗಳು ಸುಮ್ಮನಿರಿ ಅಂತ ನಮ್ಮವರಿಗೂ ಹೇಳಿದ್ದೀನಿ.
ಇಲ್ಲಿ ಏನಾಗಿದೆ ಅಂದ್ರೆ ಯಾರೋ ಮಾತಾಡ್ತಾರೆ. ಅದಕ್ಕೆ ನಮ್ಮ ತಂದೆ-ತಾಯಿ ಕೂಡ ಮಾತಾಡಿದ್ದಾರೆ. ನಮ್ಮ ಅಪ್ಪ-ಅಮ್ಮನೇ ಮಾಡಿದ್ರು ಅಂದುಕೊಳ್ಳಿ, ನಾನೇ ಬುಲ್ಡೋಜರ್ ತೆಗೆದುಕೊಂಡು ಹೋಗಿ ಎಲ್ಲಾ ಪುಡಿಪುಡಿ ಮಾಡಿ ರಸ್ತೆ ಮಾಡಿಕೊಡ್ತೀನಿ. ಜನ ನನ್ನನ್ನ ನಂಬಬೇಕು. ನಮ್ಮ ಅಪ್ಪ-ಅಮ್ಮನಿಗೂ ಇದೆಲ್ಲಾ ಬೇಡಿತ್ತು. ನೆಮ್ಮದಿಯಾಗಿ ಮನೇಲಿ ಕೂರಬೋದು. ಆದ್ರೆ ಮೊಮ್ಮಕ್ಕಳಿಗೆ ಆಸ್ತಿ ಮಾಡಬೇಕು ಅಂತ ಬಿಸಿಲಿನಲ್ಲಿ ದುಡಿಯುತ್ತಿದ್ದಾರೆ. ನಮ್ಮ ಮಗ ಮುಂದೊದಿನ ಕೆಳಗೆ ಬಿದ್ರೆ ಈ ಆಸ್ತಿ ಕೈ ಹಿಡಿಯಬಹುದು ಅಂತ ಒದ್ದಾಡುತ್ತಿದ್ದಾರೆ’ ಅಂತ ಯಶ್ ಹೇಳಿದ್ದಾರೆ.