ಬೆಗುಸರಾಯ್, ಮಾ.7- ಲಂಚ ಕೇಳುವ ಅಧಿಕಾರಿಗಳಿಗೆ ಬಿದಿರು ಕೋಲಿನಿಂದ ಅವರ ತಲೆಗೆ ಬಾರಿಸಿ ನಿಮ್ಮ ಕೆಲಸ ಕಾರ್ಯ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಬೆಗುಸರಾಯ್ ಲೋಕಸಭಾ ಕ್ಷೇತ್ರದ ಜನರಿಗೆ ಕರೆ ನೀಡಿದ್ದಾರೆ.
ಕೋದವಂಡಪುರ್ನಲ್ಲಿ ಆಯೋಜಿಸಲಾಗಿದ್ದ ಕೃಷಿ ಇಲಾಖೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿಯ ಫೈರ್ ಬ್ರಾಂಡ್ ಮಿನಿಸ್ಟರ್ ಎಂದೇ ಹೆಸರಾಗಿರುವ ಗಿರಿರಾಜ್ ಅವರು ನಿಮ್ಮ ಕೆಲಸ ಮಾಡಿಕೊಡಲು ಲಂಚ ಕೇಳುವ ಅಧಿಕಾರಿಗಳಿಗೆ ಯಾವುದೇ ಮುಲಾಜಿಲ್ಲದೆ ಬಿದಿರು ಕೋಲಿನಿಂದ ಭಾರಿಸಿ ಎಂದು ಸಲಹೆ ನೀಡಿದ್ದಾರೆ.
ಕೃಷಿ ಕಾರ್ಯದ ನಿಮಿತ್ತ ಕಚೇರಿಗಳಿಗೆ ಆಗಮಿಸುವ ರೈತಾಪಿ ವರ್ಗದವರಿಂದ ಅಧಿಕಾರಿಗಳು ಲಂಚ ಕೇಳುತ್ತಾರೆ ಎಂಬ ಸಾಕಷ್ಟು ದೂರುಗಳು ನನಗೆ ಬಂದಿದೆ. ಇಂತಹ ದೂರುಗಳನ್ನು ನನ್ನ ಬಳಿಗೆ ಏಕೆ ತರುತ್ತಿರಿ ಸರ್ಕಾರಿ ಸೇವೆಯಲ್ಲಿರುವವರು ಇರುವುದು ಜನಸೇವೆ ಮಾಡಲು ನಿಮ್ಮ ಕೆಲಸ ಮಾಡಿಕೊಡಲು. ಅಂತಹ ಕೆಲಸಕ್ಕೆ ಲಂಚ ಕೇಳಿದರೆ ಬಿದಿರು ಕೋಲಿನಿಂದ ಲಂಚಬಾಕ ಅಧಿಕಾರಿಗಳ ಬುರುಡೆಗೆ ಬಿಸಿನೀರು ಕಾಯಿಸಿ ಎಂದು ಕರೆ ನೀಡಿದ್ದಾರೆ.
ಏಟು ತಿಂದರೂ ನಿಮ್ಮ ಕೆಲಸ ಮಾಡಿಕೊಡದಿದ್ದರೆ ನಿಮ್ಮ ತಾಕತ್ತು ಏನು ಎಂಬುದನ್ನು ಅವರಿಗೆ ತೋರಿಸುವ ಮೂಲಕ ಕೆಲಸ ಮಾಡಿಸಿಕೊಳ್ಳಬೇಕು ಎಂದು ಗಿರಿರಾಜ್ ಸಿಂಗ್ ಸಲಹೆ ನೀಡುತ್ತಿದ್ದಂತೆ ಸಭೆಯಲ್ಲಿದ ಸಭಿಕರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.