ಬೆಂಗಳೂರು, ಮಾ.7- ರಾಸಲೀಲೆ ಸಿಡಿಗಳು ಬಹಿರಂಗಗೊಳ್ಳುತ್ತಿದ್ದಂತೆ ತಲೆಮರೆಸಿಕೊಂಡಿರುವ ಸಂತ್ರಸ್ತ ಯುವತಿಯ ಪತ್ತೆಗಾಗಿ ಕಬ್ಬನ್ಪಾರ್ಕ್ ಠಾಣೆ ಹಾಗೂ ಸಿಸಿಬಿ ಪೊಲೀಸರು ಜಂಟಿಯಾಗಿ ಶೋಧ ನಡೆಸುತ್ತಿದ್ದಾರೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಆಕೆ ಮತ್ತು ಕುಟುಂಬದ ಸದಸ್ಯರಿಗಾಗಿ ಬೆಂಗಳೂರು ನಗರ ಪೊಲೀಸರು ಹುಡುಕಾಡುತ್ತಿದ್ದಾರೆ.
ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ಅವರು ಈ ಬಗ್ಗೆ ದೂರು ನೀಡಿದ ನಂತರದಿಂದಲೂ ಕಬ್ಬನ್ಪಾರ್ಕ್ ಠಾಣೆ ಪೊಲೀಸರು ಸಂತ್ರಸ್ತ ಯುವತಿಯ ಪತ್ತೆಗಾಗಿ ವ್ಯಾಪಕ ಶೋಧ ನಡೆಸುತ್ತಿದ್ದಾರೆ.ಈಗಾಗಲೇ ಬೆಂಗಳೂರಿನ ಆರ್ಟಿ ನಗರ ಮತ್ತು ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿನ ಪಿಜಿಗಳಿಗೆ ಪೊಲೀಸರ ತಂಡ ಭೇಟಿ ಕೊಟ್ಟು ಪರಿಶೀಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೆ, ಯುವತಿ ಬಗ್ಗೆ ಕೆಲವು ಮಾಹಿತಿಗಳು ಲಭ್ಯವಾಗಿವೆ.
ಸಂತ್ರಸ್ತೆಯ ಕುಟುಂಬ ಸದಸ್ಯರು ಹಾಗೂ ಆಕೆಯ ಸ್ನೇಹಿತೆಯರ ಸಂಪರ್ಕಕ್ಕಾಗಿ ಕಬ್ಬನ್ಪಾರ್ಕ್ ಠಾಣೆ ಪೊಲೀಸರು ಸತತ ಪ್ರಯತ್ನ ಮಾಡುತ್ತಿದ್ದಾರೆ. ಯುವತಿ ಈತನಕ ಎಲ್ಲಿದ್ದಾರೆ ಎಂಬುದು ನಿಗೂಢವಾಗಿದೆ.ದಿನೇಶ್ ಕಲ್ಲಳ್ಳಿ ಅವರು ಕಬ್ಬನ್ಪಾರ್ಕ್ ಪೊಲೀಸ್ ಠಾಣೆಗೆ ನೀಡಿರುವ ದೂರಿಗೆ ಸಂತ್ರಸ್ತ ಯುವತಿಯ ಹೇಳಿಕೆಗಳು ಬಹಳ ಮುಖ್ಯ. ಹಾಗಾಗಿ ಪೊಲೀಸರು ಆ ಯುವತಿಯ ಪತ್ತೆಗಾಗಿ ಹರಸಾಹಸ ಮಾಡುತ್ತಿದ್ದಾರೆ.