- ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣರಾಗಿದ್ದ ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ ರಾಜ್ಯ ರಾಜಕಾರಣದ ದಿಕ್ಕು ಬದಲಿಸುವ ಸಾಧ್ಯತೆ ಇದೆ.
ಸರಕಾರದಲ್ಲಿರುವ ವಲಸಿಗ ಸಚಿವರ ವೇಗಕ್ಕೆ ಬಿಜೆಪಿಯಲ್ಲಿಯೇ ಬ್ರೇಕ್ ಹಾಕುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಈ ಪ್ರಕರಣದಲ್ಲಿ ಇಕ್ಕಟ್ಟಿಗೆ ಸಿಲುಕುವಂತಾಗಿದ್ದು, ಜಾರಕಿಹೊಳಿ ಕುಟುಂಬಕ್ಕೆ ಪರ್ಯಾಯ ಅಧಿಕಾರ ಕಲ್ಪಿಸದಿದ್ದರೆ ಸರಕಾರ ಅಲುಗಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ವಲಸಿಗರ ನಾಯಕತ್ವ ವಹಿಸಿಕೊಂಡಿದ್ದ ಜಾರಕಿಹೊಳಿ ರಾಜ್ಯ ಬಿಜೆಪಿಯಲ್ಲಿ ಪರ್ಯಾಯ ಶಕ್ತಿಯಾಗಿಯೇ ಬೆಳೆಯತೊಡಗಿದ್ದರು. ವರಿಷ್ಠರ ಜತೆಗೆ ನೇರ ಸಂಪರ್ಕ ಇಟ್ಟುಕೊಳ್ಳುವ ಮೂಲಕ ಹೈಕಮಾಂಡ್ ಮಟ್ಟದಲ್ಲಿ ತಮ್ಮದೇ ಆದ ಪ್ರಭಾವ ಬೆಳೆಸಿಕೊಂಡಿದ್ದರು.
ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಸಿ.ಪಿ. ಯೋಗೇಶ್ವರ್ಗೆ ಸಚಿವ ಸಂಪುಟದಲ್ಲಿ ಸ್ಥಾನ ಕೊಡಿಸುವುದು, ಎಚ್.ವಿಶ್ವನಾಥ್ಗೆ ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡುವಂತೆ ಹೈಕಮಾಂಡ್ ಮೂಲಕ ಯಡಿಯೂರಪ್ಪ ಮೇಲೆ ಒತ್ತಡ ಹೇರುವ ಮೂಲಕ ತಮ್ಮ ಜತೆಗಾರರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡುವಲ್ಲಿ ಮುಂಚೂಣಿಯಲ್ಲಿದ್ದರು.
ಮಿತ್ರ ಮಂಡಳಿಗೆ ಹಿನ್ನಡೆ
ರಮೇಶ್ ಜಾರಕಿಹೊಳಿ ತಮ್ಮ ತಂಡದ ಹಿತ ಕಾಯಲು ಹೈಕಮಾಂಡ್ ಮಟ್ಟದಲ್ಲಿಯೂ ಲಾಬಿ ನಡೆಸುತ್ತಿದ್ದರು. ಆದರೆ, ಈಗ ಅವರ ರಾಜೀನಾಮೆಯಿಂದ ಅವರೊಂದಿಗೆ ಗುರುತಿಸಿಕೊಂಡಿರುವ ಮಿತ್ರಮಂಡಳಿ ಸಚಿವರು ಹಾಗೂ ಶಾಸಕರಿಗೆ ಹಿನ್ನಡೆಯಾದಂತಾಗಿದೆ. ಜತೆಗೆ ರಮೇಶ್ ಜಾರಕಿಹೊಳಿ ಆರೋಪ ಮುಕ್ತವಾಗುವವರೆಗೂ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಬೇಕೆಂಬ ಒತ್ತಡವೂ ಕೇಳಿ ಬರುತ್ತಿದೆ.
ಸಮುದಾಯದ ಹೋರಾಟಕ್ಕೆ ಹಿನ್ನಡೆ
ರಮೇಶ್ ಜಾರಕಿಹೊಳಿ ಬಿಜೆಪಿ ಸೇರ್ಪಡೆಯಾಗಿ ಸಚಿವರಾದ ಮೇಲೆ ವಾಲ್ಮೀಕಿ ಸಮುದಾಯದ ನಾಯಕರಾಗಿ ಹೊರ ಹೊಮ್ಮಿದ್ದು, ಸಮುದಾಯಕ್ಕೆ ಈಗಿರುವ ಮೀಸಲಾತಿ ಪ್ರಮಾಣವನ್ನು ಶೇ. 3ರಿಂದ 7.5ಕ್ಕೆ ಹೆಚ್ಚಿಸಲು ಮುಖ್ಯಮಂತ್ರಿ ಮೇಲೆ ಒತ್ತಡ ಹೇರುವಲ್ಲಿ ಮುಂಚೂಣಿಯಲ್ಲಿದ್ದರು. ಈಗ ಆ ಹೋರಾಟಕ್ಕೂ ಹಿನ್ನಡೆಯಾಗುವ ಆತಂಕವಿದೆ.
ಜಾರಕಿಹೊಳಿ ಕುಟುಂಬದ ಪ್ರಭಾವಕ್ಕೆ ಧಕ್ಕೆ?
ಬೆಳಗಾವಿ ರಾಜಕಾರಣದಲ್ಲಿ ಘಟಾನುಘಟಿ ನಾಯರಕನ್ನು ಮೀರಿ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತ ಸಾಗಿದ್ದ ರಮೇಶ್ ಜಾರಕಿಹೊಳಿಗೆ ಈ ಸಿ.ಡಿ. ಪ್ರಕರಣ ದೊಡ್ಡ ಹೊಡೆತ ನೀಡಿದಂತಾಗಿದೆ. ಇದು ರಾಜಕೀಯವಾಗಿ ಅವರ ಕುಟುಂಬ ಹೊಂದಿದ್ದ ವರ್ಚಸ್ಸಿಗೂ ಧಕ್ಕೆಯಾಗಲಿದ್ದು, ಬೆಳಗಾವಿ ಮೇಲಿನ ಈ ಕುಟುಂಬದ ಹಿಡಿತವೂ ಸಡಿಲಗೊಳ್ಳುವ ಸಾಧ್ಯತೆ ಇದೆ.
ಸಿ.ಡಿ.ಯದ್ದು ರಮೇಶ್ನ ವೈಯಕ್ತಿಕ ವಿಚಾರ. ಅದಕ್ಕೂ ನಮ್ಮ ಕುಟುಂಬಕ್ಕೂ ಸಂಬಂಧ ಇಲ್ಲ.ಈ ವಿಚಾರದಲ್ಲಿ ಜಾರಕಿಹೊಳಿ ಕುಟುಂಬವನ್ನು ಬೆರೆಸುವ ಅಗತ್ಯವಿಲ್ಲ. ಮಂಗಳವಾರವೇ ರಾಜೀನಾಮೆ ಕೊಡಬೇಕಿತ್ತು. ಆದರೆ ಈಗ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇನ್ನು ಪೊಲೀಸರು ತನಿಖೆ ಮಾಡಿ ಸತ್ಯಾಂಶವನ್ನು ಹೊರ ತರಬೇಕು. ರಮೇಶ್ಗೆ ಅವರ ಪಕ್ಷದಲ್ಲೂ ಆಗದಿರುವವರು ಇದ್ದಾರೆ, ಎಚ್ಚರಿಕೆಯಿಂದ ಇರಬೇಕು.