ಕೊಪ್ಪಳ: ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆ ತನ್ನ ಪ್ರಿಯಕರನೊಂದಿಗೆ ಸೇರಿ ಸ್ವಂತ ಮಗನನ್ನೇ ಕೊಲೆ ಮಾಡಿಸಿ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ಜಿಲ್ಲೆಯ ಕಾರಟಗಿ ಪಟ್ಟಣದ ನಜೀರ್ ಸಾಬ್ ಕಾಲೋನಿ ನಿವಾಸಿ 12 ವರ್ಷದ ಮಲ್ಲಿಕಾರ್ಜುನ ಕಳೆದ ಅಕ್ಟೋಬರ್ 23 ರಂದು ನಿಗೂಢವಾಗಿ ಸಾವನ್ನಪ್ಪಿದ್ದನು. ಇದೀಗ ಈ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಮಲ್ಲಿಕಾರ್ಜುನ್ ತಾಯಿ ಲಕ್ಷ್ಮೀಯನ್ನು ಬಂಧಿಸಿದ್ದಾರೆ.
ಕಳೆದ ಅಕ್ಟೋಬರ್ 23 ರಂದು ರಾಯಚೂರು ಜಿಲ್ಲೆ ಬಳಗಾನೂರ ಬಳಿಯ ತುಂಗಭದ್ರಾ ಕಾಲುವೆಯಲ್ಲಿ ಕೈ ಕಾಲು ಕಟ್ಟಿದ ಸ್ಥಿತಿಯಲ್ಲಿ ಮಲ್ಲಿಕಾರ್ಜುನ್ ಶವ ಪತ್ತೆಯಾಗಿತ್ತು. ಮಗನ ಸಾವಿನಿಂದ ಅನುಮಾನಗೊಂಡ ಮಲ್ಲಿಕಾರ್ಜುನ್ ತಂದೆ ಬಳಗಾನೂರ ಠಾಣೆಯಲ್ಲಿ ದೂರು ನೀಡಿದ್ದರು. ಇದಾದ ಬಳಿಕ ನವೆಂಬರ್ ನಲ್ಲಿ ಕಾರಟಗಿ ಪೊಲೀಸ್ ಠಾಣೆಗೆ ಕೇಸ್ ವರ್ಗಾವಣೆಯಾಗಿತ್ತು. ಸಿಪಿಐ ಉದಯ ರವಿ ಮಲ್ಲಿಕಾರ್ಜುನ್ ನಿಗೂಢ ಸಾವಿನ ಪ್ರಕರಣ ಇದೀಗ ಬೇಧಿಸಿದ್ದಾರೆ. ಮಲ್ಲಿಕಾರ್ಜುನ್ ತಾಯಿ ಲಕ್ಷ್ಮೀ ಹಾಗೂ ಪ್ರಿಯಕರ ಲಾಲಸಾಬ್ ಮತ್ತು ಮಾವ ಸೋಮಣ್ಣ ಕೊಲೆ ಮಾಡಿ ಕಾಲುವೆಗೆ ಎಸೆದಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಲಕ್ಷ್ಮೀ ಲಾಲಸಾಬ್ ಹಾಗೂ ಮಾವ ಸೋಮಣ್ಣನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಈ ಕಾರಣಕ್ಕೆ ಮಗ ಅಡ್ಡಿಯಾಗುತ್ತಾನೆ ಎಂದು ಕೊಲೆ ಮಾಡಲಾಗಿದೆ ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.