ಕೋಯಿಕ್ಕೋಡ್: ಚೆನ್ನೈ- ಮಂಗಳೂರು ರೈಲಿನಲ್ಲಿ ಆಗಮಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರ ಬಳಿ ಶುಕ್ರವಾರ ಭಾರಿ ಪ್ರಮಾಣದಲ್ಲಿ ಸ್ಪೋಟಕಗಳು ಪತ್ತೆಯಾಗಿದ್ದು ರೈಲ್ವೆ ಸಂರಕ್ಷಣಾ ಪಡೆ ಇವನ್ನು ವಶಪಡಿಸಿಕೊಂಡಿದೆ.
ಮುಂಬರುವ ಕೇರಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಲಾಗಿದೆ. ವಿಭಾಗೀಯ ಭದ್ರತಾ ಆಯುಕ್ತ ಜಿತಿನ್ ಬಿ ರಾಜ್ ಅವರ ನೇತೃತ್ವದ ರೈಲ್ವೆ ಸಂರಕ್ಷಣಾ ಪಡೆಯು (ಆರ್ಪಿಎಫ್) ಶೋಧ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಅವರಿಗೆ ಮಹಿಳಾ ಪ್ರಯಣಿಕರೊಬ್ಬರ ಬಳಿ ಸ್ಫೋಟಕಗಳು ಸಿಕ್ಕಿವೆ.
‘ತಿರುವಣ್ಣಮಲೈ ನಿವಾಸಿ ರಮಣಿ ಎಂಬಾಕೆ ಚೆನ್ನೈ-ಮಂಗಳೂರು ಸೂಪರ್ಫಾಸ್ಟ್ ರೈಲಿನ ಮೂಲಕ ಚೆನ್ನೈನಿಂದ ಕಣ್ಣೂರು ಜಿಲ್ಲೆಯ ತಲಶ್ಶೇರಿಗೆ ಶುಕ್ರವಾರ ಬಂದಿದ್ದಾರೆ. ಈಕೆ ತನ್ನ ಸೀಟಿನ ಕೆಳಗೆ 117 ಜಿಲೆಟಿನ್ ಕಡ್ಡಿಗಳು ಮತ್ತು 300 ಸ್ಪೋಟಕ ಸಾಧನಗಳನ್ನು ಅಡಗಿಸಿಕೊಂಡಿದ್ದರು’ ಎಂದು ಆರ್ಪಿಎಫ್ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
‘ರಮಣಿಯನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಿಸಿ, ತನಿಖೆಯನ್ನು ಪ್ರಾರಂಭಿಸಿದ್ಧೇವೆ’ ಎಂದು ಅವರು ಹೇಳಿದ್ದಾರೆ.