ಮಂಗಳೂರು: ಪಿಕಪ್ ವಾಹನದಲ್ಲಿ ಅಕ್ರಮವಾಗಿ ಮೂರು ದನ, ಎರಡು ಕರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದಾಗ ಭಜರಂಗ ದಳ ಸಂಘಟನೆ ಕಾರ್ಯಕರ್ತರು ತಡೆದ ಘಟನೆ ಇಂದು ನಸುಕಿನ ಜಾವ ಬೆಳ್ತಂಗಡಿ ಸಮೀಪ ನಡೆದಿದೆ.
ಈ ವೇಳೆ ಗೋಸಾಗಾಟಗಾರ ರಾಜೇಶ್ ಹಾಗೂ ಇನ್ನೋರ್ವ ಆರೋಪಿ ಭಜರಂಗದಳ ಕಾರ್ಯಕರ್ತರ ಮೇಲೆ ತಲ್ವಾರ್ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಿಕಪ್ ವಾಹನದಲ್ಲಿ ನಗರದ ಕಂಕನಾಡಿಯ ಪಿ.ಕೆ.ಚಿಕನ್ ಸೆಂಟರ್ ಮಾಲಕ ಅಬ್ದುಲ್ ಕರೀಂ ಎಂಬವರ ಹೆಸರಲ್ಲಿ ಪಡೆದ ಕೋವಿಡ್-19 ಪಾಸ್ ಬಳಸಿ ರಾಜೇಶ್ ಮತ್ತು ಆತನ ಸಹಚರರು ಗೋಸಾಗಾಟ ನಡೆಸುತ್ತಿದ್ದು, ಖಚಿತ ಮಾಹಿತಿ ಪಡೆದ ಭಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ದನಗಳನ್ನು ಬೆಳ್ತಂಗಡಿಯ ಸುರ್ಯ ಪಡ್ಪುವಿನ ಮನೆಯೊಂದರಿಂದ ಸಾಗಿಸಲಾಗುತ್ತಿತ್ತು.
ರಾಜೇಶ್ ಮತ್ತು ಆತನ ಸಹಚರರು ಈ ವೇಳೆ ತಲ್ವಾರ್ನಿಂದ ಹಲ್ಲೆ ನಡೆಸಿದ್ದಾರೆ. ಆರೋಪಿಗಳು ಪಿಕಪ್ ವಾಹನದೊಂದಿಗೆ ಬರುತ್ತಿದ್ದ ಬೆಂಗಾವಲು ವಾಹನದಲ್ಲಿ ಪರಾರಿಯಾಗಿದ್ದಾರೆ. ಇದೇ ವೇಳೆ ಮತ್ತೊಂದು ತಂಡವನ್ನು ಗುರುವಾಯನಕೆರೆ ಬಳಿ ತಡೆದು ನಿಲ್ಲಿಸಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.