ನವದೆಹಲಿ: ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯ ಭಾಗವಾಗಿ ಗುರುವಾರ ದೇಶಾದ್ಯಂತ ನಡೆದ ರೈಲು ತಡೆ ಯಶಸ್ವಿಯಾಗಿದೆಯೆಂದು ರೈತರು ಹೇಳಿದ್ದರೆ, ಇತ್ತ ರೈಲ್ವೆ ಇಲಾಖೆ ರೈಲು ತಡೆಯಿಂದ ಉಂಟಾಗಿರುವುದು ನಿರ್ಲಕ್ಷಿಸಬಹುದಾದ ಪರಿಣಾಮ ಎಂದಷ್ಟೇ ಹೇಳಿದೆ.
ಪಂಜಾಬ್ ಮತ್ತು ಹರಿಯಾಣದ ಅನೇಕ ಸ್ಥಳಗಳಲ್ಲಿ ರೈಲ್ವೆ ಹಳಿಗಳಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ರೈಲ್ವೇ ಅಧಿಕಾರಿಗಳು ನಿಲ್ದಾಣಗಳಲ್ಲಿ ರೈಲುಗಳನ್ನು ನಿಲ್ಲಿಸಿದ್ದರು.
ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಹಲವೆಡೆ ಸಂಯುಕ್ತ ಕಿಸಾನ್ ಮೋರ್ಚ (ಎಸ್ ಕೆಎಂ) ನೀಡಿದ್ದ ಕರೆಗೆ ಕೃಷಿ ಸಂಘಟನೆಗಳು ಸ್ಪಂದಿಸಿ ರೈಲುಗಳನ್ನು ತಡೆ ಹಿಡಿದಿದ್ದವು.
ಆದರೆ ಹಲವು ರಾಜ್ಯಗಳಲ್ಲಿ ರೈಲು ತಡೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಎಸ್ ಕೆಎಂ ರೈಲು ತಡೆಯನ್ನು ಶಾಂತಿಯುತ ಹಾಗೂ ಯಶಸ್ವಿಯಾಗಿದೆ ಎಂದು ಹೇಳಿದ್ದು, ಕೇಂದ್ರ ಸರ್ಕಾರ ಒತ್ತಡಕ್ಕೆ ಮಣಿದು ಕಾಯ್ದೆಗಳನ್ನು ವಾಪಸ್ ಪಡೆಯಲೇಬೇಕೆಂದು ಹೇಳಿದೆ.