ಆರೋಗ್ಯದಲ್ಲಿ ದಿಢೀರ್ ಏರುಪೇರಾದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಇಂದು (ಫೆಬ್ರವರಿ 18) ಡಿಸ್ಚಾರ್ಜ್ ಆಗಿ ಮನೆಗೆ ತೆರಲಿದ್ದಾರೆ. ಈ ಸಮಯದಲ್ಲಿ ರಾಘಣ್ಣ ಜೊತೆ ಸಹೋದರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪುತ್ರ ವಿನಯ್ ರಾಜ್ ಕುಮಾರ್ ಸೇರಿದಂತೆ ಕುಟುಂಬದವರು ಮತ್ತು ಸ್ನೇಹಿತರು ಜೊತೆಯಲ್ಲಿದ್ದರು
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೊರಗೆ ಬಂದ ರಾಘಣ್ಣ ಮಾಧ್ಯಮದವರ ಜೊತೆ ಮಾತನಾಡಿ ಶೂಟಿಂಗ್ ನನ್ನನ್ನು ಕಾಪಾಡಿತು ಎಂದು ಹೇಳಿದ್ದಾರೆ. ಶೂಟಿಂಗ್ ನಲ್ಲಿ ಇದ್ದಿದ್ದರಿಂದ ತಕ್ಷಣ ಆಸ್ಪತ್ರೆಗೆ ಬರಲು ಸಾಧ್ಯವಾಯಿತು. ಬೇರೆಲ್ಲೋ ಇದ್ದಿದ್ರೆ ಕಷ್ಟವಾಗುತ್ತಿತ್ತು ಎಂದರು.
‘ಬೆಳಕು ಚಿತ್ರದ ಚಿತ್ರೀಕರಣದಲ್ಲಿದ್ದೆ. ಆಗ ನನಗೆ ಹೃದಯ ಬಡಿತದಲ್ಲಿ ಸ್ವಲ್ಪ ಏರು ಪೇರು ಕಾಣಿಸಿತು. ಹಾಗಾಗಿ ಆಸ್ಪತ್ರೆಗೆ ಬಂದೆ. ಇದೇ ಆಸ್ಪತ್ರೆಯಲ್ಲಿ ನಾನು 7 ವರ್ಷದ ಹಿಂದೆ ಸ್ಟ್ರೋಕ್ ನಿಂದ ದಾಖಲಾಗಿದ್ದೆ. ಆಯಂಜಿಯೋಗ್ರಾಮ್ ಮಾಡಿದ್ದಾರೆ. ವಾರದಲ್ಲಿ ನಾನು ಕೆಲಸಕ್ಕೆ ವಾಪಸ್ ಆಗುತ್ತೇನೆ’ ಎಂದಿದ್ದಾರೆ.
‘ಕೆಲಸದಲ್ಲಿ ಇದ್ದಿದ್ದರಿಂದ ತಕ್ಷಣ ಆಸ್ಪತ್ರೆಗೆ ಬರಲು ಸಾಧ್ಯವಾಯಿತು. ಬೇರೆಲ್ಲೋ ಇದ್ದಿದ್ರೆ ಕಷ್ಟವಾಗುತ್ತಿತ್ತು. ಶೂಟಿಂಗ್ ನನ್ನನ್ನು ಕಾಪಾಡಿತು. ನಾನು ಚೆನ್ನಾಗಿದ್ದೀನಿ. ನಿಮ್ಮ ಪ್ರೀತಿ, ಆಶೀರ್ವಾದ ಇರುವವವರೆಗೂ ನನ್ನನ್ನು ಆ ಶಕ್ತಿ ಕಾಪಾಡುತ್ತೆ’ ಎಂದು ರಾಘಣ್ಣ ಹೇಳಿದ್ದಾರೆ.
ರಾಘವೇಂದ್ರ ರಾಜ್ ಕುಮಾರ್ ಮಂಗಳವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ರಾಘಣ್ಣ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಬಳಿಕ ರಾಘಣ್ಣ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಕುಟುಂಬದವರು ನೀಡಿದ ಬಳಿಕ ಅಭಿಮಾನಿಗಳು ನಿಟ್ಟುಸಿರು ಬಿಟ್ಟರು.