ಬೆಂಗಳೂರು,ಫೆ.18-ಕಾನೂನು ತಜ್ಞರ ಜೊತೆ ಚರ್ಚಿಸಿ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡುವ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಆಶ್ವಾಸನೆ ನೀಡಿದ್ದಾರೆಂದು ಶಾಸಕ ರಾಜುಗೌಡ ನಾಯಕ್ ಹೇಳಿದ್ದಾರೆ. ಸಿಎಂ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ನಮ್ಮ ಸಮುದಾಯದ ಮುಖಂಡರು, ಯಡಿಯೂರಪ್ಪನವರೊಂದಿಗೆ ಮೀಸಲಾತಿ ಹೆಚ್ಚಳ ಮಾಡುವ ಸಂಬಂಧ ಚರ್ಚೆ ಮಾಡಿದ್ದೇವೆ. ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ನಮ್ಮ ಸಮುದಾಯ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದೆ. ಹೀಗಾಗಿ ಮೀಸಲಾತಿ ಹೆಚ್ಚಳ ಮಾಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಇದಕ್ಕೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿರುವುದು ಆಶಾದಾಯಕ ಬೆಳವಣಿಗೆ ಎಂದರು. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಕಾನೂನು ತಜ್ಞರ ಜೊತೆ ಚರ್ಚಿಸುವ ಭರವಸೆ ಕೊಟ್ಟಿದ್ದಾರೆ. ಸಲಾತಿಗಾಗಿ ಎಲ್ಲರೂ ಪಟ್ಟು ಹಿಡಿದಿದ್ದಾರೆ. ನಮಗೆ ನ್ಯಾಯಬದ್ದವಾದ ಮೀಸಲಾತಿ ಸಿಗಬೇಕೆಂದು ಹೇಳಿದರು.
ಎಸ್ಸಿ-ಎಸ್ಟಿಗೆ ಶೇ.50ರಷ್ಟು ಮೀಸಲಾತಿ ನೀಡಬೇಕೆಂದು ಕೇಳಿದ್ದೇವೆ. ಇಲ್ಲವೇ ಎಲ್ಲವನ್ನು ಸಾಮಾನ್ಯ ಮಾಡಬೇಕೆಂದು ಒತ್ತಾಯ ಮಾಡಿದ್ದೇವೆ. ಮೀಸಲಾತಿಗಾಗಿ ಹೋರಾಟ ಆರಂಭವಾಗಿದ್ದೆ ವಾಲ್ಮಿಕಿ ಸಮುದಾಯದಿಂದ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗಲೇ ಈ ಬೇಡಿಕೆ ಇಟ್ಟಿದ್ದೆವು.
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾರೆ ಎಂಬ ಕಾರಣಕ್ಕಾಗಿ ಈಗ ಕೆಲವರು ಹೋರಾಟ ನಡೆಸಿದ್ದಾರೆ. ಏಕೆಂದರೆ ಅವರು ಎಲ್ಲರಿಗೂ ನ್ಯಾಯ ಒದಗಿಸುತ್ತಾರೆ ಎಂಬ ವಿಶ್ವಾಸ ಎಲ್ಲರಿಗೂ ಇದೆ ಎಂದು ಹೇಳಿದರು. ನಾನು ಬಿಜೆಪಿ ಶಾಸಕನಾಗಿ ಮಾತನಾಡಿದರೆ ಸಂವಿಧಾನವೇ ಬದಲು ಎನ್ನುತ್ತಾರೆ.
ಕಾಂಗ್ರೆಸ್ ಶಾಸಕನಾಗಿ ಮಾತನಾಡಿದರೆ ಎಲ್ಲವೂ ಸರಿ ಎನ್ನುತ್ತಾರೆ. ನಾನು ಮೂರು ಬಾರಿ ಶಾಸಕನಾಗಿರುವಾಗ ನನ್ನ ಮಗನಿಗೇಕೆ ಮೀಸಲಾತಿ ಎಂದು ಪ್ರಶ್ನಿಸಿದೆ.
ಐಪಿಎಸ್, ಐಎಎಸ್ ಆದವರ ಮಕ್ಕಳೇ ಮತ್ತೇ ಹುದ್ದೆಗೆ ಸೇರುತ್ತಿದ್ದಾರೆ. ಬಡ ರೈತರ ಮಕ್ಕಳಿಗೂ ಮೀಸಲಾತಿ ಸಿಗಬೇಕೆಂದು ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ ಈ ಬಾರಿಯಾದರೂ ಏಮ್ಸ್ ಕೊಡುವಂತೆ ಮನವಿ ಮಾಡಿದ್ದೇವೆ. ಹಿಂದೆ ನಮ್ಮ ಭಾಗಕ್ಕೆ ಸಿಕ್ಕಿದ್ದ ಏಮ್ಸ್ ಮತ್ತು ಐಐಟಿಯನ್ನು ಬಿಟ್ಟುಕೊಟ್ಟಿದ್ದೇವೆ. ಈ ಬಾರಿಯಾದರೂ ನಮಗೆ ನ್ಯಾಯ ಸಿಗಬೇಕೆಂದು ಮನವಿ ಮಾಡಿದರು.