ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಹರಿಹಾಯ್ದಿದ್ದಾರೆ. ಹಾವು-ಚೇಳುಗಳನ್ನು ಎದುರಿಸಿ ನಮ್ಮ ತಂದೆ ಬಂದಿದ್ದಾರೆ ಎಂದು ಸಿಎಂ ಪುತ್ರ ವಿಜಯೇಂದ್ರ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರ ಸಿಎಂ ಕುರ್ಚಿಗೆ ಹೈಕಮಾಂಡ್ ನಿಂದ ಕುತ್ತು ಬಂದಾಗಲೆಲ್ಲಾ ರಾಜಕೀಯ ಸ್ಥಿರತೆಗೆ ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಬಳಸಿಕೊಳ್ಳುತ್ತಾರೆ. ಅವರ ಉದ್ದೇಶ ಪಂಚಮಸಾಲಿ ಲಿಂಗಾಯತರಿಗೆ ಅವಕಾಶ ನೀಡುವುದಲ್ಲ, ಬದಲಿಗೆ ತಮ್ಮ ರಾಜಕೀಯ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದು ಎಂದು ಆರೋಪಿಸಿದರು.
ಬಿಜೆಪಿ ಪಕ್ಷದಿಂದ ಈಗಾಗಲೇ ಯತ್ನಾಳ್ ಅವರಿಗೆ ಮುಖ್ಯಮಂತ್ರಿಗಳ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ್ದಕ್ಕಾಗಿ ಶೋಕಾಸ್ ನೊಟೀಸ್ ಜಾರಿ ಮಾಡಲಾಗಿದೆ. ಆದರೆ ಅವ್ಯಾವುದಕ್ಕೂ ಅವರು ಕ್ಯಾರೇ ಅಂದಿಲ್ಲ. ಮತ್ತೆ ಸಿಎಂ ಮೇಲೆ ಇಂದು ವಿಜಯಪುರದಲ್ಲಿ ವಾಗ್ದಾಳಿ ಮುಂದುವರಿಸಿದ್ದಾರೆ.
ಸಿಎಂ ಯಡಿಯೂರಪ್ಪ ಈಗ ಸಂಪೂರ್ಣ ಬದಲಾಗಿದ್ದಾರೆ, ಅವರ ಮಗ ವಿಜಯೇಂದ್ರ ಹೇಳಿದಂತೆ ಕೇಳುತ್ತಾರೆ, ಸರ್ಕಾರದ ಆಡಳಿತದಲ್ಲಿ ಸಂಪೂರ್ಣವಾಗಿ ವಿಜಯೇಂದ್ರ ಹಸ್ತಕ್ಷೇಪವಿದೆ, ಇದಕ್ಕೆ ನಿಗಮ-ಮಂಡಳಿಗಳಿಗೆ ಅಧ್ಯಕ್ಷರಾಗಿ ನೇಮಕವಾಗಿರುವವರೇ ಸಾಕ್ಷಿ, ವಿಜಯೇಂದ್ರ ಅವರ ಕೈ ಕಾಲು ಒತ್ತುವವರನ್ನು, ರಾತ್ರಿ ವ್ಯವಸ್ಥೆ ಮಾಡುವವರಿಗೆ ಅವರಿಗೆ ಬೇಕಾದವರನ್ನು ನೇಮಕ ಮಾಡಲಾಗುತ್ತಿದೆ. ಇವ್ಯಾವುದೂ ಸಿಎಂ ಗಮನಕ್ಕೆ ಬರುತ್ತಿಲ್ಲ, ಪಕ್ಷಕ್ಕಾಗಿ ದುಡಿಯುವ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆಯಿಲ್ಲದಂತಾಗಿದೆ. ಹಾವು-ಚೇಳುಗಳು ಸಿಎಂ ಅವರ ಮನೆಯಲ್ಲಿವೇ ಇವೆ ಎಂದು ಹರಿಹಾಯ್ದರು.
ಯಡಿಯೂರಪ್ಪ ಕುಟುಂಬದವರೇ ಹಾವು, ಚೇಳಾಗಿ ತೊಂದರೆ ನೀಡುತ್ತಿದ್ದಾರೆ. ತಮಗೆ ಆಗದವರ ವಿರುದ್ಧ ಅಪಪ್ರಚಾರ ನಡೆಸಲು ವಿಜಯೇಂದ್ರ ಬಳಿ ನಕಲಿ ಸಿಡಿ ತಯಾರಿಸುವ ದೊಡ್ಡ ಕೇಂದ್ರವೇ ಇವೆ, ಯಡಿಯೂರಪ್ಪ ಕುಟುಂಬ ಇತ್ತೀಚೆಗೆ ಮಾರಿಷಸ್ ಗೆ ವಿಮಾನದಲ್ಲಿ ಹೋಗಿದ್ದು ಏಕೆ, ಅಲ್ಲಿ ಏನು ಹಣದ ವ್ಯವಹಾರ ನಡೆದಿದೆ ಎಂದು ರಾಜ್ಯದ ಜನತೆಗೆ ಗೊತ್ತಾಗಬೇಕು ಎಂದು ಒತ್ತಾಯಿಸಿದರು.
ವಿಜಯಪುರದಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಗೆ ಗುರುತಿಸಿರುವ ಜಾಗದ ಬಗ್ಗೆ ಕೂಡ ಅಸಮಾಧಾನ ವ್ಯಕ್ತಪಡಿಸಿದ ಯತ್ನಾಳ್, ಮುಖ್ಯಮಂತ್ರಿ ಯಡಿಯೂರಪ್ಪನವರು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಅನುದಾನ ಒಟ್ಟು 385 ಕೋಟಿ ರೂಪಾಯಿ ಬಿಡುಗಡೆ ಮಾಡುತ್ತಿದ್ದಾರೆ, ವಿಜಯಪುರ ವಿಮಾನ ನಿಲ್ದಾಣ ಅಭಿವೃದ್ಧಿಗೆ ನೀಡಿದ್ದು ಕೇವಲ 95 ಕೋಟಿ ರೂಪಾಯಿ, ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿಗಳಿಗೆ ಕಾಳಜಿಯಿಲ್ಲ. ಎಂದು ಆರೋಪಿಸಿದರು.
MLA @BasanagoudaBJP expresses unhappiness on the site identified for developing airport in #Vijayapura. He also lashed out @CMofKarnataka for allocating more grants to #Shivamogga airport. @XpressBengaluru @GovindKarjol @MBPatil @CMofKarnataka @BSYBJP @InfraVijayapur @gvaroon pic.twitter.com/vSsjQa2ebF
— Mahesh M Goudar। ಮಹೇಶ್ ಮ ಗೌಡರ (@MahiPEN_TNIE) February 15, 2021