ಬೆಳಗಾವಿ: ‘ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಔಟ್ ಆಫ್ ಮೈಂಡ್ ಆಗಿದ್ದಾರೆ. ಹತಾಶರಾಗಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅವರನ್ನು ಬಸ್ ನಿಲ್ದಾಣದಲ್ಲಿ ಹುಡುಕಬೇಕು’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಇಲ್ಲಿ ಶನಿವಾರ ವ್ಯಂಗ್ಯವಾಡಿದರು.
‘ಪಕ್ಷ ಸೂಚಿಸಿದರೆ ಮುಂದಿನ ಚುನಾವಣೆಯಲ್ಲಿ ಗೋಕಾಕದಲ್ಲಿ ಸ್ಪರ್ಧಿಸುವೆ’ ಎಂಬ ಲಕ್ಷ್ಮಿ ಹೇಳಿಕೆಗೆ ಸಚಿವರು ಮೇಲಿನಂತೆ ಪ್ರತಿಕ್ರಿಯಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಕೈಗೊಳ್ಳುವ ನಿರ್ಣಯಕ್ಕೆ ಮತ್ತು ಸಮಾಜದವನಾಗಿ ಸ್ವಾಮೀಜಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಿರುತ್ತೇನೆ. ವಾಲ್ಮೀಕಿ ಸಮಾಜಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಮಾತ್ರವೇ ಕೇಳುತ್ತಿದ್ದೇವೆ. ಅದನ್ನು ನೀಡಲು ತಾಂತ್ರಿಕ ಸಮಸ್ಯೆ ಏನಿಲ್ಲ’ ಎಂದರು.
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟಿಸಲು ಎಲ್ಲರಿಗೂ ಹಕ್ಕಿದೆ. ನಮ್ಮ ಸಮಾಜದ ಬಗ್ಗೆ ಯಡಿಯೂರಪ್ಪ ಪಾಸಿಟಿವ್ ಆಗಿದ್ದಾರೆ. ಅವರ ಮನದಲ್ಲಿ ಕೊಡಬಾರದು ಎಂದಿದ್ದರೆ ಹರಿಹರದ ಕಾರ್ಯಕ್ರಮಕ್ಕೆ ಬರುತ್ತಿರಲೇ ಇಲ್ಲ. ನಮ್ಮ ಬೇಡಿಕೆ ಹಿಂದಿನಿಂದಲೂ ಇದೆ. ಇತರ ಸಮಾಜದವರು ಇತ್ತೀಚೆಗೆ ಕೇಳುತ್ತಿದ್ದಾರೆ’ ಎಂದು ಹೇಳಿದರು.