ಬೆಂಗಳೂರು: ಮುಂದಿನ ತಿಂಗಳು ಬಜೆಟ್ ಮಂಡಿಸಲು ಸಿದ್ಧವಾಗಿರುವ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬುಧವಾರ ಬಜೆಟ್ ಪೂರ್ವ ತಯಾರಿ ಸಭೆಗೂ ಮುನ್ನ ನಗರದ ಶಿವಾನಂದ ಸರ್ಕಲ್ ನಲ್ಲಿರುವ ಜನಾರ್ದನ ಹೋಟೆಲ್ನಲ್ಲಿ ಬಿಸಿ ಬಿಸಿ ಮಸಾಲೆ ದೋಸೆ ಹಾಗೂ ಬಿಸಿ ಬಿಸಿ ಕಾಫಿ ಸವಿದರು.
ಇಂದು ಬೆಳಗ್ಗೆ ವಿಧಾನಸೌಧದಲ್ಲಿ ಕೆಂಗಲ್ ಹನುಮಂತಯ್ಯ ಜನ್ಮದಿನಾಚರಣೆ ಪ್ರಯುಕ್ತ ಮಾಲಾರ್ಪಣೆ ನೆರವೇರಿಸಿದ ನಂತರ ಬಜೆಟ್ ಪೂರ್ವ ಸಿದ್ಧತಾ ಸಭೆ ನಡೆಸಲು ಶಕ್ತಿಭವನಕ್ಕೆ ತೆರಳುವ ಮುನ್ನ ಜನಾರ್ದನ ಹೋಟೆಲ್ಗೆ ತೆರಳಿ ದೋಸೆ ಹಾಗೂ ಕಾಫಿ ಸವಿದರು. ಸಿಎಂಗೆ ಸಚಿವ ಉಮೇಶ್ ಕತ್ತಿ ಹಾಗೂ ವಿಧಾನಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್ ಮತ್ತು ಎಸ್.ವಿ. ಸಂಕನೂರ್ ಸಹ ಸಾಥ್ ನೀಡಿದರು.
ಸದಾ ಮುಖ್ಯಮಂತ್ರಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಎಚ್ ವಿಶ್ವನಾಥ್ ಅವರು ಇಂದು ಹೋಟೆಲ್ ನಲ್ಲಿ ಸಿಎಂ ಜತೆ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದರು.
ಯಡಿಯೂರಪ್ಪ ಅವರಿಗೆ ಇಷ್ಟದ ಹೋಟೆಲ್ಗಳಲ್ಲಿ ಒಂದಾಗಿರುವ ಜನಾರ್ದನಕ್ಕೆ ಆಗಾಗ ಭೇಟಿ ನೀಡುವ ಸಿಎಂ, ಇಂದು ಕೂಡ ಭೇಟಿ ನೀಡಿ ಮಸಾಲೆ ದೋಸೆ ಸೇವಿಸಿ ಬಿಸಿ ಬಿಸಿ ಕಾಫಿ ಹೀರಿದರು. ನಂತರ ಶಕ್ತಿಭವನಕ್ಕೆ ತೆರಳಿ ಬಜೆಟ್ ಪೂರ್ವಭಾವಿ ಸಭೆ ಆರಂಭಿಸಿದರು.