ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ಒಂದು ಭಾಷೆಯಾಗಿ ಕಲಿಸುವುದು ಕಡ್ಡಾಯ..ಶಿಕ್ಷಣ ಸಚಿವ ಸುರೇಶ್ಕುಮಾರ್
ಯಾವುದೇ ಶಾಲೆ ಆಗಿರಬಹುದು. ಬೆಂಗಳೂರಿನ ಕೇಂದ್ರೀಯ ಶಾಲೆಯಿಂದ ಹಿಡಿದು ಕೊನೆಯ ಶಾಲೆವರೆಗೂ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಬೇಕು. ಇದು ಈ ನೆಲದ ಕಾನೂನಾಗಿದೆ. ಅದಕ್ಕೋಸ್ಕರ ಕಾಯ್ದೆ ಕೂಡ ಜಾರಿಗೆ ತರಲಾಗಿದೆ.
ಕನ್ನಡ ಕಲಿಸಲು ಸಮರ್ಪಕವಾದ ಶಿಕ್ಷಕರನ್ನು ತುಂಬಿಸಿಕೊಳ್ಳಲು ಶೀಘ್ರವೇ ಕ್ರಮ ಕೈಗೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಸುರೇಶ್ಕುಮಾರ್ ಅವರು ಭರವಸೆ ನೀಡಿದರು.
ಗಡಿ ಭಾಗದ ಮರಾಠಿ, ಉರ್ದು ಶಾಲೆಯಲ್ಲಿ ಕನ್ನಡ ಶಿಕ್ಷಕರ ಕೊರತೆ ಸಂಬಂಧ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಖಾನಾಪುರದಲ್ಲಿ ಉತ್ತರಿಸಿದ ಶಿಕ್ಷಣ ಸಚಿವ ಸುರೇಶ್ಕುಮಾರ್ ಅವರು ಎಲ್ಲಾ ಕಡೆ ವರದಿ ತೆಗೆದುಕೊಂಡಿದ್ದೇವೆ.
ಕೇವಲ ಗಡಿ ಭಾಗ ಅಷ್ಟೇ ಅಲ್ಲ, ಎಲ್ಲಾ ಕಡೆ ಶಿಕ್ಷಕರ ಕೊರತೆಯಿದೆ. ಕೆಲವು ಕಡೆ ಶಿಕ್ಷಕರ ಸಂಖ್ಯೆ ಹೆಚ್ಚಿದೆ. ನಗರ ಪ್ರದೇಶಗಳಲ್ಲಿ ಹೆಚ್ಚಿದೆ. ಗಡಿ ಪ್ರದೇಶದ ಶಾಲೆಗಳಿಗೆ ಬರಲು ಸ್ವಲ್ಪ ಹಿಂಜರಿತವಿದೆ. ಹೀಗಾಗಿ ಈ ಸಂಬಂಧ ಶಿಕ್ಷಕರ ಕೊರತೆ ನೀಗಿಸಲು ವರದಿ ತರಿಸಿಕೊಂಡು, ಯಾವ್ಯಾವ ಶಾಲೆಯಲ್ಲಿ ಶಿಕ್ಷಕರ ಕೊರತೆಯಿದೆಯೋ ಅಲ್ಲಿ ಶಿಕ್ಷಕರನ್ನು ನೇಮಿಸಲಾಗುತ್ತದೆ ಎಂದು ಹೇಳಿದರು.